ರಾಮದುರ್ಗ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಭೀಕರ ಬರಗಾಲ ತಲೆದೂರುವ ಲಕ್ಷಣಗಳಿವೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾವುದೇ ಪ್ರದೇಶದಲ್ಲಿ ಉಲ್ಬಣಗೊಳ್ಳದಂತೆ ಜಾಗೃತಿ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬರಗಾಲ ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ ಮತ್ತು ಏಪ್ರೀಲ್ ತಿಂಗಳಲ್ಲಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮತ್ತು ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಅವರು ತಿಳಿಸಿದರು.
ಜಿಲ್ಲೆಗೆ ಕುಡಿಯುವ ನೀರಿನ ಕಾಮಗಾರಿಗೆ ರೂ. 74 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ರಾಮದುರ್ಗ ತಾಲ್ಲೂಕಿಗೆ ರೂ. 7 ಕೋಟಿ ಮತ್ತು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರ ಹಿನ್ನೆಲೆಯಲ್ಲಿ ಒಟ್ಟು ರೂ. 65 ಲಕ್ಷ ಬಿಡುಗಡೆಯಾಗಿದೆ ಎಂದು ವಿವಿರ ನೀಡಿದರು.
ತಾಲ್ಲೂಕಿನಲ್ಲಿ ಒಟ್ಟು 62 ಶಾಲಾ ಕುಡಿಯುವ ನೀರಿನ ಯೋಜನೆ, 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಎಲ್ಲ ಯೋಜನೆಗಳನ್ನು ಮಾರ್ಚ್ ಅಂತ್ಯದ ವೇಳೆಗೆ ಮುಗಿಸಲು ಆದೇಶಿಸಿದರು.
ತೃಪ್ತಿಕರವಾಗಿಲ್ಲ
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಸತಿ ಯೋಜನೆ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸ್ಥಳೀಯ ರಾಜಕೀಯದಿಂದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದೇ ತೊಂದರೆಗೆ ಒಳಗಾಗುತ್ತಿದೆ. ವಸತಿ ಹಂಚಿಕೆಯಲ್ಲಿ ತಾರತಮ್ಯ ಮಾಡದೆ ನಿಯಮ ಅನುಸಾರ ಹಂಚಿಕೆ ಮಾಡಿ ಅನುಷ್ಠಾನ ಮಾಡಬೇಕೆಂದು ಹೇಳಿದರು.
ಕುಡಿಯುವ ನೀರಿನ ಯೋಜನೆ ಹೊರತುಪಡಿಸಿ ರಸ್ತೆಗಳ ಅಭಿವೃದ್ದಿಗೆ ರೂ. 1.15 ಕೋಟಿ, ಕೆರೆಗಳ ಅಭಿವೃದ್ಧಿಗೆ ರೂ. 77 ಲಕ್ಷ ಅನುದಾನ ಜಿಲ್ಲಾ ಪಂಚಾಯಿತಿದಿಂದ ರಾಮದುರ್ಗ ತಾಲ್ಲೂಕಿಗೆ ಬಿಡುಗಡೆಯಾಗಿದೆ ಮತ್ತೊಂದು ಪ್ರಶ್ನೆಗೆ ವಿವರಣೆ ನೀಡಿದರು.
ನೋಡಲ್ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ. ಎಚ್. ಓಬಳಪ್ಪ, ತಹಶೀಲ್ದಾರ ಗೀತಾ ಕೌಲಗಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ. ಎಂ. ಗೂಳಪ್ಪನವರ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.