ADVERTISEMENT

ನೀರು ಪೂರೈಕೆ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 5:50 IST
Last Updated 15 ಸೆಪ್ಟೆಂಬರ್ 2011, 5:50 IST

ಯಾದವಾಡ (ಗೋಕಾಕ): ಇಲ್ಲಿಗೆ ಸಮೀಪದ ಅವರಾದಿ, ಹಳೇಯರಗುದ್ರಿ, ಹೊಸಯರಗುದ್ರಿ, ತಿಮ್ಮಾಪುರ ಹಾಗೂ ವೆಂಕಟಾಪುರ ಗ್ರಾಮಗಳ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ `ಬಹುಗ್ರಾಮ ಅಭಿವೃದ್ಧಿ ಯೋಜನೆ~ ಅಡಿಯಲ್ಲಿ ಒಟ್ಟು 2.22 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಬಾಲಚಂದ್ರ ತಿಳಿಸಿದರು.

ಬುಧವಾರ ಗೋಕಾಕ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅರಭಾವಿ ವಿಧಾನಸಭಾ ಮತಕ್ಷೇತ್ರದ ಜನತೆಯ ಬಹುತೇಕ ಅವಶ್ಯಕ ಬೇಡಿಕೆಗಳಿಗೆ ಸ್ಪಂದಿಸಿ ಪ್ರಾಮಾಣಿಕ ಯತ್ನಗಳ ಮೂಲಕ ಈಡೇರಿಸಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು ಒಂದು ಕೋಟಿ ರೂ. ವೆಚ್ಚದ ಸುವರ್ಣ ಗ್ರಾಮೋದಯ ಯೋಜನೆಗೂ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ವಿಶೇಷ ಅನುದಾನದ 15 ಲಕ್ಷ ರೂ.ಗಳ ವೆಚ್ಚದಲ್ಲಿ 2 ಕಿ.ಮೀ. ದೂರದ ಅವರಾದಿ-ಅರಳಿಮಟ್ಟಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಭೀಮಪ್ಪ ಕುಕ್ಕಡಿ, ಜಿ.ಪಂ. ಸದಸ್ಯ ರಮೇಶ ಉಟಗಿ, ಎಪಿಎಂಸಿ ಅಧ್ಯಕ್ಷ ಶಿದ್ಲಿಂಗ ಕಂಬಳಿ ಮತ್ತು ನಿರ್ದೇಶಕ ಎಂ.ಎಂ. ಪಾಟೀಲ, ತಾ.ಪಂ. ಸದಸ್ಯ ಕಲ್ಲಪ್ಪಗೌಡ ಲಕ್ಕಾರ, ಜಿ.ಪಂ. ಮಾಜಿ ಸದಸ್ಯರಾದ ಡಾ. ರಾಜೇಂದ್ರ ಸಣ್ಣಕ್ಕಿ ಮತ್ತು ರಂಗಪ್ಪ ಇಟ್ಟನ್ನವರ, ಪ್ರಭಾ ಶುಗರ್ಸ್‌ ಉಪಾಧ್ಯಕ್ಷ ಅಶೋಕ ಪಾಟೀಲ ಮತ್ತು ನಿರ್ದೇಶಕ ಗಿರೀಶ ಹಳ್ಳೂರ, ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಅಶೋಕ ನಾಯ್ಕ, ಬಿ.ಎ. ನಾಡಗೌಡ, ಜಿ.ಪಂ. ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಎಸ್. ಉದಾನಶೆಟ್ಟಿ, ಭೂಸೇನಾ ನಿಗಮದ ಅಧಿಕಾರಿ ಚಿಂಚೋಳಿಕರ ಮತ್ತಿತರರು ಉಪಸ್ಥಿತರಿದ್ದರು.

ಸೈಕಲ್ ವಿತರಣೆ: ಇದಕ್ಕೂ ಪೂರ್ವದಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮತಕ್ಷೇತ್ರ ವ್ಯಾಪ್ತಿಯ ಅವರಾದಿ ಮತ್ತು ಹುಣಶ್ಯಾಳ ಪಿಜಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.