ADVERTISEMENT

ಫ್ಯಾಶನ್‌ ಶೋನಲ್ಲಿ ಮಿಂಚಿದ ವಿದ್ಯಾರ್ಥಿನಿಯರು

ಕೆಎಲ್‌ಇ ವಿನ್ಯಾಸ ತಾಂತ್ರಿಕ ಸಂಸ್ಥೆಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 5:33 IST
Last Updated 12 ಏಪ್ರಿಲ್ 2018, 5:33 IST
ಬೆಳಗಾವಿಯ ಕೆಎಲ್‌ಇ ಫ್ಯಾಷನ್‌ ಕಾಲೇಜಿನ ವಿದ್ಯಾರ್ಥಿನಿಯರು ಬುಧವಾರ ವಸ್ತ್ರವಿನ್ಯಾಸಗಳನ್ನು ಪ್ರದರ್ಶಿಸಿದರು (ಎಡಚಿತ್ರ) ಆಕರ್ಷಿಸಿದ ರೂಪದರ್ಶಿಗಳ ಮಾರ್ಜಾಲ ನಡಿಗೆ
ಬೆಳಗಾವಿಯ ಕೆಎಲ್‌ಇ ಫ್ಯಾಷನ್‌ ಕಾಲೇಜಿನ ವಿದ್ಯಾರ್ಥಿನಿಯರು ಬುಧವಾರ ವಸ್ತ್ರವಿನ್ಯಾಸಗಳನ್ನು ಪ್ರದರ್ಶಿಸಿದರು (ಎಡಚಿತ್ರ) ಆಕರ್ಷಿಸಿದ ರೂಪದರ್ಶಿಗಳ ಮಾರ್ಜಾಲ ನಡಿಗೆ   

ಬೆಳಗಾವಿ: ಗಮನಸೆಳೆದ ವಸ್ತ್ರವಿನ್ಯಾಸಗಳು. ರ‍್ಯಾಂಪ್‌ ಮೇಲೆ ವಯ್ಯಾರದಿಂದ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು. ವಿನ್ಯಾಸಕರ ಪ್ರತಿಭೆ ಅನಾವರಣ. ನೆರೆದಿದ್ದವರ ಕಣ್ಣು ಕೋರೈಸಿದ ಮಾರ್ಜಾಲ ನಡಿಗೆ.

ಕೆಎಲ್ಇ ವಿನ್ಯಾಸ ತಾಂತ್ರಿಕ ಸಂಸ್ಥೆಯಿಂದ ಇಲ್ಲಿನ ಜೆಎನ್‌ಎಂಸಿ ಆವರಣದ ಜೀರಗೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಫ್ಯಾಷನ್‌ ಶೋ ನೋಟಗಳಿವು.

ಸಂಸ್ಥೆಯ ಅಂತಿಮ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಕೌಶಲದಿಂದ ವಿನ್ಯಾಸಗೊಳಿಸಿದ 28 ಥೀಮ್‌ಗಳನ್ನು ಆಧರಿಸಿದ ವಸ್ತ್ರಗಳನ್ನು ಧರಿಸಿ ಪ್ರದರ್ಶಿಸಿದರು. 150ಕ್ಕೂ ಹೆಚ್ಚು ಹೊಸಬಗೆಯ ವಸ್ತ್ರವಿನ್ಯಾಸಗಳನ್ನು 30 ಯುವ ರೂಪದರ್ಶಿಗಳು, 30 ಮಕ್ಕಳು ಮಾರ್ಜಾಲ ನಡಿಗೆ ಮೂಲಕ ಪ್ರಸ್ತುತಪಡಿಸಿ ಸಭಿಕರ ಮನಸೂರೆಗೊಂಡರು.

ADVERTISEMENT

ತೀರ್ಪುಗಾರರಾಗಿದ್ದ ಕರ್ನಾಟಕ ರೇಷ್ಮೆ ಮಂಡಳಿ ಜಂಟಿ ನಿರ್ದೇಶಕ ವಿ.ಎಚ್. ಮಹಾರೆಡ್ಡಿ, ಅರುಣಾ ಮತ್ತಿಕೊಪ್ಪ ಥೀಮ್‌ಗಳು ಹಾಗೂ ವಿದ್ಯಾರ್ಥಿನಿಯರ ಪ್ರಯತ್ನವನ್ನು ಶ್ಲಾಘಿಸಿದರು. ವಿದ್ಯಾರ್ಥಿನಿಯರ ಪರವಾಗಿ ನೌಷಿನ್ ಅನಿಸಿಕೆ ಹಂಚಿಕೊಂಡರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಗೋವಾದ ವಸ್ತ್ರವಿನ್ಯಾಸಕಿ ವೆರ್ಮಾ ಡಿ’ಮೆಲ್ಲೊ, ‘ಸೃಜನಾತ್ಮಕ ಆಲೋಚನೆಗಳ ಮುಖಾಂತರ ನವೀನ ವಿನ್ಯಾಸಗಳನ್ನು ರೂಪಿಸಬೇಕು. ದೇಶದ ಕೀರ್ತಿಯನ್ನು ಪ್ರಪಂಚದಾದ್ಯಂತ ಹರಡುವುದು ಎಲ್ಲ ಕ್ಷೇತ್ರದವರ ಕರ್ತವ್ಯವಾಗಿದೆ. ಭಾರತ ವೈವಿಧ್ಯ ಹಾಗೂ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯು ಹೊಸ ವಿನ್ಯಾಸಗಳಿಗೆ ಸ್ಫೂರ್ತಿಯಾಗಿದೆ. ಈ ದೃಷ್ಟಿಯಲ್ಲಿ ಹೊಸ ವಿನ್ಯಾಸಗಳನ್ನು ರೂಪಿಸಬೇಕು’ ಎಂದು ಹೇಳಿದರು.

‘ಫ್ಯಾಷನ್ ವಿನ್ಯಾಸ ಕ್ಷೇತ್ರದಲ್ಲಿ ತರಬೇತಿ ಪಡೆದು ಛಾಪು ಮೂಡಿಸುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಸಾವಯವ ವಸ್ತುಗಳನ್ನು ಉಪಯೋಗಿಸಿ ವಸ್ತ್ರ ತಯಾರಿಸಬೇಕು. ಆದಿವಾಸಿಗಳ ಜೊತೆಗೂಡಿ ಹಸಿರು ವಸ್ತ್ರಗಳ ವಿನ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು. ‘ಫ್ಯಾಷನ್ ಪ್ರಪಂಚ ದೊಡ್ಡ ಉದ್ಯಮ ಮತ್ತು ಮಾರುಕಟ್ಟೆಯಾಗಿ ಬೆಳೆದಿದೆ. ಇಲ್ಲಿನ ಅವಕಾಶಗಳನ್ನು ಯುವಜನರು ಬಳಸಿಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ‘ಸಂಸ್ಥೆಯು ಎಲ್ಲ ರೀತಿಯ ಶಿಕ್ಷಣಕ್ಕೂ ಆದ್ಯತೆ ನೀಡಿದೆ’ ಎಂದು ನುಡಿದರು.

‘ಮಂಥನ’ ಸ್ಮರಣಸಂಚಿಕೆ ಬಿಡುಗಡೆ ಮಾಡಲಾಯಿತು. ಶೈಕ್ಷಣಿಕವಾಗಿ ವಿಶೇಷ ಸಾಧನೆ ಮಾಡಿ ಪದಕ ಪಡೆದ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ರ‍್ಯಾಂಕ್‌ ಗಳಿಸಿದ ವಿದ್ಯಾರ್ಥಿನಿಯರನ್ನು ಸತ್ಕರಿಸಲಾಯಿತು. ‌ಅತ್ಯುತ್ತಮ ವಿನ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು.

ಪ್ರಾಂಶುಪಾಲ ಪ್ರೊ.ಅಶೋಕ ಇಟಗಿ ಸ್ವಾಗತಿಸಿದರು. ಆರ್‌. ಸಾಮಂತ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.