ADVERTISEMENT

ಬಿಜೆಪಿಯವರದು ಸುಳ್ಳಿನ ಕಂತೆಗಳ ಯಾತ್ರೆ: ಸಚಿವ ಎಂ.ಬಿ. ಪಾಟೀಲ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 10:20 IST
Last Updated 21 ಡಿಸೆಂಬರ್ 2017, 10:20 IST
ಬಿಜೆಪಿಯವರದು ಸುಳ್ಳಿನ ಕಂತೆಗಳ ಯಾತ್ರೆ: ಸಚಿವ ಎಂ.ಬಿ. ಪಾಟೀಲ ಟೀಕೆ
ಬಿಜೆಪಿಯವರದು ಸುಳ್ಳಿನ ಕಂತೆಗಳ ಯಾತ್ರೆ: ಸಚಿವ ಎಂ.ಬಿ. ಪಾಟೀಲ ಟೀಕೆ   

ಬೆಳಗಾವಿ: ‘ಬಿಜೆಪಿಯವರದು ಸುಳ್ಳಿನ ಕಂತೆಗಳ ಯಾತ್ರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಟೀಕಿಸಿದರು.

ಜಿಲ್ಲೆಯ ಗೋಕಾಕದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಜೈಲಿನಲ್ಲಿ ಇರುವವನನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುತ್ತಾರೆ. ಹಾಗೆಯೇ ಬಿಜೆಪಿಯವರು ತಪ್ಪು, ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ADVERTISEMENT

ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಹಳಷ್ಟು ಯೋಜನೆಗಳನ್ನು ನೀಡಿದ್ದೇವೆ. ಅವರು ಹರಿದ ಸೀರೆ ಹಾಗೂ ಮುರಿದ ಸೀರೆಯನ್ನು ಕೊಟ್ಟರು. ಹಗರಣಗಳಲ್ಲೇ ಮುಳುಗಿದ್ದರು ಎಂದು ಕುಟುಕಿದರು.

ಧರ್ಮ ಧರ್ಮದ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ

ಗೋಕಾಕ ಕ್ಷೇತ್ರಕ್ಕೆ 42 ಮಂದಿ ಆರ್‌ಎಸ್‌ಎಸ್‌ನವರು ಬಂದಿದ್ದು, ಧರ್ಮ ಧರ್ಮದ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಜಾತಿ ಸಂಘರ್ಷ ಸೃಷ್ಟಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ದೂರಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಇಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಸಮಾಜದವರನ್ನೂ ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ ನಾನೇ ಹಿಂದೆ ಸರಿದು ಒಟ್ಟಾಗಿ ಕೆಲಸ ಮಾಡುತ್ತೇವೆ. ನನ್ನ ಅಣ್ಣ, ತಮ್ಮಂದಿರ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಡಿ. ಅದನ್ನೆಲ್ಲಾ ನಾವು ಸರಿ ಮಾಡಿಕೊಳ್ಳುತ್ತೇವೆ. ಜಿಲ್ಲೆಯಲ್ಲಿ 10ರಿಂದ 12 ಸ್ಥಾನ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.