ಸವದತ್ತಿ: ಪಟ್ಟಣ ಹಾಗೂ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಬಿದ್ದ ಮಳೆಗೆ ಜನರು ತತ್ತರಿಸಿದ್ದಾರೆ. ಪಟ್ಟಣದಲ್ಲಿ ಸುರಿದ ಮಳೆಯು ಕೇವಲ ಅರ್ಧ ಗಂಟೆಯಲ್ಲಿ ಪದಕಿಪುರಂನಲ್ಲಿನ ಗಟಾರ್ಗಳು ತುಂಬಿ ಹರಿದಿವೆ. ಹದಗೆಟ್ಟ ರಸ್ತೆಯ ಮೇಲೆ ಕಲ್ಲುಗಳು ಬಿದ್ದು ವಾಹನ ಸಂಚಾರಕ್ಕೆ ಅಡತಡೆ ಮಾಡಿತ್ತು. ನೀರು ಬಸ್ ನಿಲ್ದಾಣದಲ್ಲಿ ನುಗ್ಗಿದ್ದರಿಂದ ತೊಂದರೆಯಾಗಿದೆ.
ಹಂಚಿನಾಳ ಗ್ರಾಮದಲ್ಲಿ ಸುರಿದ ಭಾರಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಮನೆಯಲ್ಲಿನ ಆಹಾರ ಧಾನ್ಯಗಳ ಚೀಲಗಳು, ಪಾತ್ರೆಗಳು, ಬಟ್ಟೆ, ಹಾಸಿಗೆ, ಮನೆಯಲ್ಲಿ ಕಟ್ಟಿದ್ದ ಆಡುಗಳು, ಒಂದು ಕರು ನೀರಲ್ಲಿ ತೇಲಿ ಹೋಗಿದೆ.
ಗ್ರಾಮದ ನಾಯಕರ ಗೋಮಾಳ ಪ್ರದೇಶದ ಹುಸೇನಸಾಬ ಮಿರ್ಜಿ, ರಾಜೇಸಾಬ ಮಿರ್ಜಿ, ಗಂಗಪ್ಪ ಅಂಕಲಗಿ, ಯಲ್ಲಪ್ಪ ಜಾಳಿಕೊಪ್ಪ, ಬಸೀರಹ್ಮದ ನಾಯಕರ ಮುಂತಾದವರ ಮನೆಗಳಲ್ಲಿ ನೀರು ಹರಿದಿದೆ. ಕಳೆದ ಬೇಸಿಗೆಯಲ್ಲಿ ಇದೇ ಗ್ರಾಮದಲ್ಲಿ ಬೆಂಕಿಯ ಆಹುತಿಗೆ ಮನೆಗಳು ಭಸ್ಮವಾದ ನೋವು ಹಸಿರಾಗಿರುವಾಗಲೇ ಈಗ ಈ ಅನಾಹುತ ಸಂಭವಿಸಿದೆ.
‘ಸಂಜಿ ಅಡುಗೆ ಮಾಡಿ ಇನ್ನೇನು ಊಟ ಮಾಡಬೇಕು ಅನ್ನುವಾಗ ಮಳೆರಾಯ ಗುಡುಗು, ಸಿಡಿಲು ಸಮೇತ ಅರ್ಭಟಿಸಿದ, ನಮ್ಮ ಮನ್ಯಾಗಿನ ಅಡುಗೆ, 4 ಚೀಲ ಜೋಳ, ಗೋಧಿ, ಅಕ್ಕಿ, ಹಾಸಿಗೆ ಹೊದಿಕೆ ತೇಲಿ ಹೋದವು, ಮನೆಯನ್ನು ಸ್ವಚ್ಛಗೊಳಿಸಿದೆ, ಉಟ್ಟ ಬಟ್ಟೆ ಮೇಲ ಅದೇವಿ, ಯಾರು ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ನೊಂದ ಸೈನಾಜ್ ಮಿರ್ಜಿ ಪ್ರಜಾವಾಣಿಗೆ ತಮ್ಮ ಅಳನ್ನು ತೋಡಿಕೊಂಡರು. ಮಳೆಯಿಂದ ಆವಾಂತರ ಆಗಿದ್ದರೂ ಯಾವ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಬಂದಿಲ್ಲ ಎಂದು ಹುಸೇನಸಾಬ ಮಿರ್ಜಿ ಅಸಮಾದಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.