ADVERTISEMENT

ಬೆಳಗಾವಿ: ನಾಡಹಬ್ಬ ಉತ್ಸವ 18ರಿಂದ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 5:20 IST
Last Updated 17 ಅಕ್ಟೋಬರ್ 2012, 5:20 IST

ಬೆಳಗಾವಿ: ನಗರದ 85ನೇ ನಾಡಹಬ್ಬ ಉತ್ಸವ ಸಮಿತಿ ವತಿಯಿಂದ ಅಕ್ಟೋಬರ್ 18ರಿಂದ ಅ. 21ರವರೆಗೆ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ನಿತ್ಯ ಸಂಜೆ 6 ಗಂಟೆಗೆ ನಾಡಹಬ್ಬ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಚ್.ಬಿ. ರಾಜಶೇಖರ, `ಅ. 18ರಂದು ಸಂಜೆ 6 ಗಂಟೆಗೆ ಸಾಹಿತ್ಯ ಭವನದಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಹಾಗೂ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. `ಕೇಂದ್ರ ಸರ್ಕಾರದ ಹೊಸ ಆರ್ಥಿಕ ಸುಧಾರಣಾ ನೀತಿ~ ಕುರಿತು ಆರ್‌ಪಿಡಿ ಕಾಲೇಜಿನ ಪ್ರಾಧ್ಯಾಪಕ ಡಾ. ಸುಭಾಷ ಪಾಟೀಲ ಹಾಗೂ ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಮಸಳಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಶಾಂತಲಾ ನಾಟ್ಯಾಲಯದ ವತಿಯಿಂದ ನೃತ್ಯ ಪ್ರದರ್ಶನ ನಡೆಯಲಿದೆ~ ಎಂದು ವಿವರಿಸಿದರು.

`ಅ. 19ರಂದು `ಸಾಹಿತ್ಯ ಹಾಗೂ ಕವಿಗೋಷ್ಠಿ~ ಹಮ್ಮಿಕೊಳ್ಳಲಾಗುತ್ತದೆ. ಎಸ್.ಡಿ. ಇಂಚಲರ ಕುರಿತು ಪ್ರೊ. ಜಯವಂತ ಕಾಡದೇವರ ಹಾಗೂ ಡಾ. ಜಯದೇವಿ ತಾಯಿ ಲಿಗಾಡೆ ಕುರಿತು ಡಾ. ಮೈತ್ರಾ ಯಿಣಿ ಗದಿಗೆಪ್ಪನವರ ಉಪನ್ಯಾಸ ನೀಡಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಿ ಡಾ. ಬಿ.ಎ. ಸನದಿ ವಹಿಸಲಿದ್ದು, ಸುಮಾರು 15 ಕವಿಗಳು ಪಾಲ್ಗೊಳ್ಳಲಿದ್ದಾರೆ. ಬಳಿಕ ಕಪರಟ್ಟಿ ಬಸವರಾಜ ಹಿರೇಮಠ ತಂಡದವರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ~ ಎಂದು ಅವರು ಮಾಹಿತಿ ನೀಡಿದರು.

`ಅ. 21ರಂದು `ಭ್ರಷ್ಟಾಚಾರ ವಿರೋಧಿ ಆಂದೋಲನ~ ಕುರಿತು ಸಮಾಜ ಪರಿವರ್ತನಾ ಸಮು ದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಮಾತನಾಡ ಲಿದ್ದಾರೆ. ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಮಾತನಾಡಲಿದ್ದಾರೆ. ಕೆಎಲ್‌ಇ ಸಂಗೀತ ಕಾಲೇಜಿನ ಪ್ರಾಧ್ಯಾಪಕಿ ಸುನಿತಾ ಕೆ. ಪಾಟೀಲ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ~ ಎಂದರು.

ಅ. 21ರಂದು `ಆರೋಗ್ಯ, ಆಧ್ಯಾತ್ಮಿಕ ಚಿಂತನ ಗೋಷ್ಠಿ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳ ಲಾಗಿದೆ. ಆಧ್ಯಾತ್ಮ ಮತ್ತು ಆರೋಗ್ಯದ ಕುರಿತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ವಿದ್ಯಾ, ರಾಜಯೋಗಿನಿ ವಿಜಯಲಕ್ಷ್ಮೀ ಮಾತನಾಡಲಿದ್ದಾರೆ.

ಅಧ್ಯಕ್ಷತೆಯನ್ನು ಡಾ. ಎಚ್.ಬಿ. ರಾಜಶೇಖರ ವಹಿಸಲಿದ್ದಾರೆ. ಪ್ರೊ. ಎಂ.ಎಸ್. ಇಂಚಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, ಬುಡಾ ಅಧ್ಯಕ್ಷ ಪರಮಾನಂದ ಗೊದ್ವಾನಿ ಹಾಗೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಬಾಳಣ್ಣ ಕಗ್ಗಣಗಿ ಅವರನ್ನು ಸನ್ಮಾನಿಸಲಾಗುತ್ತಿದೆ. ನಂತರ ರವಿ ನೃತ್ಯ ಕಲಾ ಮಂದಿರದಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಕೆ. ಜೋರಾಪುರ, ಕೋಶಾಧ್ಯಕ್ಷ ವಿ.ಕೆ. ಪಾಟೀಲ, ಪುಷ್ಪಾ ಹುಬ್ಬಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.