ಬೆಳಗಾವಿ: ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಹಮ್ಮಿಕೊಂಡಿರುವ `ಸೋಪ್ ಸಂತೆ~ ಬುಧವಾರ ಆರಂಭಗೊಂಡಿತು.
ಸಂತೆಯನ್ನು ಉದ್ಘಾಟಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಅಧ್ಯಕ್ಷ ಶಿವಾನಂದ ನಾಯ್ಕ, `ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಮಾರ್ಗ ದರ್ಶನದಲ್ಲಿ ಅಂದಿನ ದಿವಾನರಾಗಿದ್ದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಆರಂಭವಾದ ಈ ಸಂಸ್ಥೆ 96 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕರ್ನಾಟಕ ರಾಜ್ಯದ ಹೆಸರನ್ನು ಪರಿಚಯಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿದೆ~ ಎಂದು ಹೇಳಿದರು.
`ಸೋಪ್ ಸಂತೆ ನಡೆಸುತ್ತಿರುವುದು ಕೇವಲ ಲಾಭಕ್ಕಾಗಿ ಅಲ್ಲ. ಸಂಸ್ಥೆಯ ಎಲ್ಲ ಉತ್ಪಾದನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದೇ ನಮ್ಮ ಉದ್ದೇಶವಾಗಿದೆ. ಶ್ರೀಗಂಧವನ್ನು ರಾಜ್ಯದಲ್ಲಿ ಹೆಚ್ಚಾಗಿ ಬೆಳೆಸಿ ಅದರಿಂದ ಆರ್ಥಿಕ ಅಭಿವೃದ್ಧಿ ಹೊಂದ ಬಹುದು. ಹೀಗಾಗಿ ರಿಯಾಯತಿ ದರದಲ್ಲಿ ಶ್ರೀಗಂಧದ ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ.
ಅವು ಬೆಳೆದ ನಂತರ ಮಾರುಕಟ್ಟೆ ಬೆಲೆಯಲ್ಲಿ ಸಂಸ್ಥೆಯೇ ಖರೀದಿಸುವ ವ್ಯವಸ್ಥೆಯನ್ನು ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಉಚಿತವಾಗಿ ಶ್ರೀಗಂಧದ ಸಸಿಗಳನ್ನು ನೀಡಲಾಗುತ್ತಿದೆ~ ಎಂದು ಶಿವಾನಂದ ನಾಯ್ಕ ಹೇಳಿದರು.
ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರಗೌಡ ಪಾಟೀಲ, ಕನಾಟಕವು ಶ್ರೀಗಂಧಕ್ಕೆ ಹೆಸರಾಗಿದ್ದು, ರೈತರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಸಹಕಾರದೊಂದಿಗೆ ಸಸಿಗಳನ್ನು ಪಡೆದು ಅವುಗಳನ್ನು ಬೆಳೆಸಿ ಅದೇ ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಆರ್ಥಿಕ ಪ್ರಗತಿಯನ್ನು ಹೊಂದಬೇಕು~ ಎಂದು ಹೇಳಿದರು.
ಶಾಸಕ ಸಂಜಯ ಪಾಟೀಲ ಸೋಪ್ ಸಂತೆ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.