ADVERTISEMENT

ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 9:05 IST
Last Updated 19 ಫೆಬ್ರುವರಿ 2011, 9:05 IST

ಬೈಲಹೊಂಗಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ರಾಜ್ಯ ಘಟಕದ ಆಶ್ರಯದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾ ಅಧ್ಯಕ್ಷ ವಿ.ಜಿ.ಸೊಪ್ಪಿಮಠ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ವಿ.ಬಿ. ದಾಮಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ 80ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 25 ವರ್ಷಗಳಿಂದ ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಭದ್ರತೆ ಸೌಲಭ್ಯ, ಕನಿಷ್ಠ ವೇತನ ನಿಗದಿ ಪಡಿಸಬೇಕು. ನೂತನವಾಗಿ ಆರಂಭಿಸಿದ ಸ್ವಾವಲಂಬನೆ ರಾಷ್ಟ್ರೀಯ ಪಿಂಚಣಿ ಪದ್ಧತಿ ರದ್ದಾಗಬೇಕು. ಮೇಲಾಧಿಕಾರಿಗಳ ಹಾಗೂ ಸ್ಥಳೀಯ ಪ್ರತಿನಿಧಿಗಳ ಕಿರುಕುಳಕ್ಕೆ ಕಡಿವಾಣ ಹಾಕಬೇಕು. ಪ್ರತಿ ತಿಂಗಳು 5ರೊಳಗಾಗಿ ಗೌರವಧನ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಾರ್ಯ ನಿರ್ವಹಣೆಯ ವೇಳೆಯನ್ನು ಮೊದಲಿನಂತೆ ಮುಂದುವರೆಸಬೇಕು.

ಸಂಘದ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಕಟ್ಟಿಗೆ ಮತ್ತು ಸೀಮೆ ಎಣ್ಣೆಗೆ ಹೆಚ್ಚು ಅನುದಾನ ನೀಡಬೇಕು. ಆಹಾರ ಸಾಮಗ್ರಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ಬೇಡಿಕೆಗಳ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ ತೋರಲಾಗಿದ್ದು, ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಜಿಲ್ಲಾ ಅಧ್ಯಕ್ಷ ಸೊಪ್ಪಿಮಠ ಎಚ್ಚರಿಕೆ ನೀಡಿದರು.

ಇಂಚಲ ಕ್ರಾಸ್‌ದಿಂದ ಜರುಗಿದ ಪ್ರತಿಭಟನಾ ಮೆರವಣಿಗೆಯಲ್ಲಿ ಗಂಗವ್ವ ಘಂಟಿ, ಸುನೀತಾ ಅಂಟಿನ, ಚೆನ್ನಮ್ಮಾ ಮತ್ತಿಕೊಪ್ಪ, ವಿಮಲಾ ತಮ್ಮಣ್ಣವರ, ಎ.ಎಸ್. ತಳವಾರ, ಸಿ.ಬಿ.ನಲವಡಿ, ವಿ.ಪಿ. ಪಾತ್ರೋಟ, ಎ.ಎಸ್. ಕಿತ್ತೂರ, ಎಸ್.ಟಿ. ಬಡಿಗೇರ ಹಾಗೂ ಸಾವಿರಕ್ಕೂ ಹೆಚ್ಚು ಅಂಗನನಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.