ಬೆಳಗಾವಿ: ಅರಣ್ಯ ಇಲಾಖೆ ಸ್ವಾಮ್ಯದಲ್ಲಿದ್ದ ಭೂಮಿಯನ್ನು ಕಾನೂನು ಬಾಹಿರವಾಗಿ ನಾಲ್ಕು ಕುಟುಂಬಗಳಿಗೆ ಮಂಜೂರು ಮಾಡಿಸಿದ ಆರೋಪದ ಹಿನ್ನೆಲೆಯಲ್ಲಿ ಬೈಲಹೊಂಗಲದ ಉಪವಿಭಾಗಾಧಿಕಾರಿ (ಎಸಿ) ವಿ.ಬಿ. ದಾಮಣ್ಣನವರ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಫೆ. 29ರಂದು ನಿವೃತ್ತಿಯಾಗಲಿದ್ದ ದಾಮಣ್ಣನವರ ಮೇಲೆ ಕಾನೂನು ಬಾಹಿರವಾಗಿ ಸರ್ಕಾರಿ ಭೂಮಿ ಮಂಜೂರು ಮಾಡಿದ ಆರೋಪ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶನಿವಾರದಂದು (ಫೆ. 25) ಅಮಾನತುಗೊಳಿಸಿ ಆದೇಶ ಹೊರಡಿಸಿದೆ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿದೆ.
ಬೈಲಹೊಂಗಲ ತಾಲ್ಲೂಕಿನ ಕಿತ್ತೂರು ಸಮೀಪದ ಕುಲವಳ್ಳಿ ಗುಡ್ಡದಲ್ಲಿನ ಭೂಮಿಯನ್ನು ಬ್ರಿಟಿಷರು ನಾಲ್ಕು ಕುಟುಂಬಗಳಿಗೆ ಬಹುಮಾನದ ರೂಪದಲ್ಲಿ ನೀಡಿತ್ತು. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯಾದ ಬಳಿಕ ಈ ಭೂಮಿಯನ್ನು ಅರಣ್ಯ ಇಲಾಖೆ ತನ್ನ ಸ್ವಾಮ್ಯಕ್ಕೆ ಪಡೆದುಕೊಂಡಿತ್ತು.
ಈ ಕ್ರಮದ ವಿರುದ್ಧ ನಾಲ್ಕು ಕುಟುಂಬದವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಇದನ್ನು ಟ್ರಿಬ್ಯುನಲ್ ಕೋರ್ಟ್ನಲ್ಲೇ ಇತ್ಯರ್ಥಗೊಳಿಸಿಕೊಳ್ಳುವಂತೆ ಆದೇಶಿಸಿತ್ತು ಎನ್ನಲಾಗಿದೆ.
ನಾಲ್ಕು ಕುಟುಂಬಗಳಿಗೆ ಭೂಮಿಯನ್ನು ಮಂಜೂರು ಮಾಡುವ ಪ್ರಸ್ತಾವವನ್ನು 1991 ಹಾಗೂ 2000ರಲ್ಲಿ ಅಂದಿನ ಉಪವಿಭಾಗಾಧಿಕಾರಿಗಳು ತಿರಸ್ಕರಿಸಿದ್ದರು. ಆದರೆ, ನಿವೃತ್ತಿಯ ಅಂಚಿನಲ್ಲಿದ್ದ ಪ್ರಸ್ತುತ ಉಪವಿಭಾಗಾಧಿಕಾರಿ ವಿ.ಬಿ. ದಾಮಣ್ಣನವರ ಅವರು, ಈ ಭೂಮಿಯನ್ನು ಆ ಕುಟುಂಬಗಳಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದರು.
ಈ ಆರೋಪ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಕೈಗೊಂಡ ರಾಜ್ಯ ಸರ್ಕಾರವು ಉಪವಿಭಾಗಾಧಿಕಾರಿಗಳನ್ನು ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.