ADVERTISEMENT

ಭ್ರಷ್ಟಾಚಾರದ ವಿರುದ್ಧ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:45 IST
Last Updated 7 ಫೆಬ್ರುವರಿ 2012, 8:45 IST

ಗೋಕಾಕ: ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ  ಭ್ರಷ್ಟಾಚಾರದಿಂದ  ಹದಗೆಟ್ಟಿರುವ ದೇಶದ ವ್ಯವಸ್ಥೆಯನ್ನು ಸರಿ ಪಡಿಸಲು ಜನ ಸಾಮಾನ್ಯರು ಜಾಗೃತರಾಗಿ ಹೋರಾಟ ಆರಂಭಿಸ ಬೇಕು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದ ತಾ.ಪಂ ಸಭಾಭವನದಲ್ಲಿ ಭಾನುವಾರ ಜನ ವಿಕಾಸ ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಪಂಚಾಯತ್ ರಾಜ್ ಸಬಲೀಕರಣ ಬೆಳಗಾವಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಲಭಿಸಿ ದಶಕಗಳೇ ಉರುಳಿದರೂ ದೇಶದ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಅಸಹಾಯಕ ವಾಗಿರುವ ರಾಜಕೀಯ ವ್ಯವಸ್ಥೆ, ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯ ಕೊರತೆಯಿಂದಾಗಿ ದೇಶ ಹಿಂದುಳಿ ದಿದೆ. ದೇಶದ ಬೆಳವಣಿಗೆಗಾಗಿ  ಪ್ರತಿಯೊಬ್ಬರೂ ಸಂಘಟಿತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಅವರು ಮಾತನಾಡಿ , ಪಂಚಾಯತ್ ರಾಜ್ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ಧಿಯನ್ನು ದೃಷ್ಟಿ ಯಲ್ಲಿಟ್ಟುಕೊಂಡು ಅಂದು `ನೀರ್ ಸಾಬ್~ ಎಂದು ಕರೆಯಲ್ಪಟ್ಟ ದಿವಂಗತ ನಜೀರಸಾಬ್ ಅವರ ಕನಸು ನನಸಾಗಿಸಲು ಜನ ಪ್ರತಿನಿಧಿಗಳು ಜಾಗೃತರಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಜನವಿಕಾಸ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವಿಲ್‌ಫ್ರೆಡ್ ಡಿಸೋಜ ಅವರು ಮಾತನಾಡಿ, ಪ್ರಜಾಪ್ರಭುತ್ವ, ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ ರಾಜ್ ವ್ಯವಸ್ಥೆಯನ್ನು ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತಗೊಳಿಸಲು  ವ್ಯವಸ್ಥಿತ ಮತ್ತು ಸಂಘಟಿತ ಯತ್ನದ ಅನಿವಾರ್ಯತೆ ಇದೆ ಎಂದರು.

ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜು ಹುಣಸೂರ ಮಾತನಾಡಿದರು.  ರಾಜ್ಯದ ವಿವಿಧ ಜಿಲ್ಲೆಗಳಿಂದ ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ. ಸದಸ್ಯರು ಭಾಗವಹಿಸಿದ್ದರು.

ಬೆಳಗಾವಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಾ ಯಾದವಾಡ, ರಾಮದುರ್ಗ ತಾ.ಪಂ ಅಧ್ಯಕ್ಷೆ  ಮಂಜುಳಾ ದೇವರೆಡ್ಡಿ,  ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಟಿ ಲಾರೆನ್ಸ್ ಉಪಸ್ಥಿತರಿದ್ದರು. ರವಿ ನಾಯ್ಕರ ಸ್ವಾಗತಿಸಿದರು. ಅನ್ನಪೂರ್ಣ ನಿರ್ವಾಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.