ಬೆಳಗಾವಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಮಡೆ ಮಡೆ ಸ್ನಾನ ಪದ್ಧತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ಮಹಿಳಾ ಒಕ್ಕೂಟದ (ಎನ್ಎಫ್ಐಡಬ್ಲ್ಯು) ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಾರ್ಯಕರ್ತರು, ಮೂಢನಂಬಿಕೆ ಆಚರಣೆಗೆ ಕಡಿವಾಣ ಹಾಕಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಿಸುತ್ತಿರುವ ಮಡೆ ಮಡೆ ಸ್ನಾನ ಪದ್ಧತಿ ನಿಷೇಧಿಸುವಂತೆ ಒತ್ತಾಯಿಸಿ ನಿಡಮಾಮಿಡಿ ಸ್ವಾಮೀಜಿ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ ಕಾರ್ಯಕರ್ತರು, ‘ಈ ಪದ್ಧತಿಯು ಜಾತಿಗಳ ನಡುವೆ ತಾರತಮ್ಯವನ್ನು ಹುಟ್ಟು ಹಾಕುತ್ತದೆ.
ಬ್ರಾಹ್ಮಣರು ಊಟ ಮಾಡಿದ ಎಲೆಗಳ ಮೇಲೆ ಉರುಳುವುದರಿಂದ ತಮ್ಮ ಚರ್ಮರೋಗ ಕಡಿಮೆಯಾಗುತ್ತದೆ ಎಂಬ ಮೂಢನಂಬಿಕೆ ಬಡ ಹಾಗೂ ಕಳೆ ಜಾತಿಯ ಜನರಲ್ಲಿದೆ. ದೇವರ ದೃಷ್ಟಿಯಲ್ಲಿ ಎಲ್ಲ ಜಾತಿಯವರೂ ಒಂದೇ ಆಗಿದ್ದಾರೆ’ ಎಂದು ಎನ್ಎಫ್ಐಡಬ್ಲ್ಯು ರಾಜ್ಯ ಕಾರ್ಯದರ್ಶಿ ಪ್ರಮೋದಾ ಹಜಾರೆ ತಿಳಿಸಿದರು.
‘ನರ ಬಲಿ, ಬೆತ್ತಲೆ ಪೂಜೆ, ದೇವರ ಹೆಸರಿನಲ್ಲಿ ಭಿಕ್ಷೆ ಬೇಡುವುದು, ದೇವದಾಸಿ ಅಂಥ ಪದ್ಧತಿಗಳನ್ನು ನಿಷೇಧಿಸಬೇಕು. ದೇವರ ಹೆಸರಿನಲ್ಲಿ ನಡೆಯುವ ಇಂಥ ಪದ್ಧತಿಗಳಿಂದ ದಲಿತರ ಮೇಲೆ ಇನ್ನಷ್ಟು ಅನ್ಯಾಯ ಆಗುತ್ತದೆ. ಹೀಗಾಗಿ ಸರ್ಕಾರವು ಕೂಡಲೇ ಇಂಥ ಮೂಢನಂಬಿಕೆಗಳ ಆಚರಣೆಗಳ ಮೇಲೆ ನಿಷೇಧ ಹೇರಬೇಕು’ ಒತ್ತಾಯಿಸಿದರು.
ವಿದ್ಯುತ್: ಕುಂದುಕೊರತೆ ಸಭೆ ಇಂದು
ಬೆಳಗಾವಿ: ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಗರ ಉಪವಿಭಾಗ ನಂ. 2 ಕಚೇರಿಯಲ್ಲಿ ಇದರ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆಯನ್ನು ಇದೇ 10ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಸಭೆಗೆ ಆಗಮಿಸಿ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.