ADVERTISEMENT

ಮರಾಠಿ ಭಾಷಿಕ ಯುವ ಅಘಾಡಿಯಿಂದ ಪ್ರತಿಭಟನೆ

ಮರಾಠಿ ಭಾಷಿಕ ಯುವ ಅಘಾಡಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:31 IST
Last Updated 4 ಡಿಸೆಂಬರ್ 2013, 8:31 IST

ಬೆಳಗಾವಿ: ಗೂಂಡಾಗಳಂತೆ ವರ್ತಿಸಿ ಬೆಳಗಾವಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸ ಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಮರಾಠಿ ಭಾಷಿಕ ಯುವ ಅಘಾಡಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.

ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳದ ಶಾಸಕ ಸಂಭಾಜಿ ಪಾಟೀಲ ಅವರೊಂದಿಗೆ ಆಗಮಿಸಿದ್ದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ‘ಬೆಳಗಾವಿ, ಖಾನಾಪುರ, ಕಾರವಾರ, ನಿಪ್ಪಾಣಿ, ಬೀದರ್‌, ಭಾಲ್ಕಿ ಸಹ ಸಂಯುಕ್ತ ಮಹಾರಾಷ್ಟ್ರ ಝಾಲಾಚ್‌ ಪಾಹಿಜೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕರ ಕಚೇರಿ ಮೇಲೆ ದಾಳಿ ನಡೆಸಿದ ಕರವೇ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸಂಭಾಜಿ, ‘ಬೆಳಗಾವಿಯಲ್ಲಿ ಮರಾಠಿಗರಿಗೆ ಆಗುತ್ತಿ ರುವ ಅನ್ಯಾಯಕ್ಕೆ ಹೆಗಲು ಕೊಡುವು ದಾಗಿ ಹೇಳಿದ್ದೆ. ಆದರೆ, ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವುದು ವಿಪರ್ಯಾಸ. ಅಷ್ಟಾಗಿ ಯೂ ನನ್ನ ಮೇಲೆ ಕ್ರಮ ಕೈಗೊಳ್ಳು ವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಷಯ’ ಎಂದು ಪ್ರತಿಕ್ರಿಯಿಸಿದರು.

‘ದೇಶದ ಪ್ರಜೆಗಳಾಗಿ ಸಿಗಬೇಕಾದ ಹಕ್ಕು ಕೇಳುವುದು ನಮ್ಮ ಕರ್ತವ್ಯ. ರಾಜ್ಯ ಸರ್ಕಾರವು ಮರಾಠಿ ಭಾಷಿಕರಿಗೆ ಸಿಗಬೇಕಾದ ಹಕ್ಕನ್ನು ಕೊಡುತ್ತಿಲ್ಲ. ಎಲ್ಲಿಯವರೆಗೆ ನಾವು ಇಲ್ಲಿ ಇರುತ್ತೇ ವೆಯೋ, ನಮ್ಮ ಹಕ್ಕನ್ನು ನೀಡುವುದು ಕರ್ನಾಟಕ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಮಹಾಮೇಳಾವ್‌ಗೆ ಬರುತ್ತಿದ್ದ ಎಂಇಎಸ್‌ ಕಾರ್ಯಕರ್ತರ ಮೇಲೆ ಕನ್ನಡ ಸಂಘಟನೆಯವರು ಹಲ್ಲೆ ನಡೆಸಿದ್ದಾರೆ. ಮಹಾನಗರ ಪಾಲಿಕೆ ಕಚೇರಿ ಮತ್ತು ಕ್ಯಾಂಪ್‌ನಲ್ಲಿರುವ ನನ್ನ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಬೆಳಗಾವಿಯಲ್ಲಿ ಮರಾಠಿಗರ ಮತ್ತು ಕನ್ನಡಿಗರ ನಡುವೆ ಮಧುರ ಬಾಂಧವ್ಯ ಇದೆ. ಹೊರಗಿ ನಿಂದ ಬಂದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಗಲಾಟೆ ನಡೆಸುತ್ತಿ ದ್ದಾರೆ. ಮರಾಠಿಗರಿಗೆ ಇಲ್ಲಿ ರಕ್ಷಣೆ ನೀಡಲಾಗುತ್ತಿಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಕರವೇ ಶಾಂತಿ ಭಂಗಕ್ಕೆ ಮುಂದಾಗುತ್ತಿದೆ. ಜಿಲ್ಲಾಡಳಿತ ಮೌನ ವಹಿಸಿರು ವುದು ಖಂಡನೀಯ. ಇಂಥ ಘಟನೆ ಮತ್ತೆ ನಡೆದರೆ ಮರಾಠಿ ಭಾಷಿಕರು ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.

ಸಂಭಾಜಿ ಅಣಕು ಶವಯಾತ್ರೆ ಇಂದು
ಬೆಳಗಾವಿ: ಕರ್ನಾಟಕ ಸರ್ಕಾರದ ಶವಯಾತ್ರೆ ನಡೆಸುವುದಾಗಿ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಒಳಗಾಗಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಸಂಭಾಜಿ ಪಾಟೀಲರ ಅಣುಕು ಶವಯಾತ್ರೆಯು ಡಿ. 4ರಂದು ಬೆಂಗಳೂರಿನಿಂದ ಬೆಳಗಾವಿವರೆಗೆ ನಡೆಯಲಿದೆ.

ರಾಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ನಾಯಕ ವಾಟಾಳ ನಾಗರಾಜ ಹಾಗೂ ಸಾ.ರಾ. ಗೋವಿಂದು ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಶವಯಾತ್ರೆ ಆರಂಭಗೊಳ್ಳಲಿದೆ. ಸಂಜೆ 5 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಯಾತ್ರೆ ತಲುಪಲಿದೆ. ಕನ್ನಡ ಪರ ಸಂಘಟನೆಗಳು ಆಗಮಿಸಬೇಕು ಎಂದು ಮಾಜಿ ಮೇಯರ್‌ ಸಿದ್ಧನಗೌಡ ಪಾಟೀಲ ರಾಘವೇಂದ್ರ. ಜೋಶಿ, ಅಶೋಕ ಚಂದರಗಿ ಹಾಗೂ ರಮೇಶ ಸೊಂಟಕ್ಕಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT