ADVERTISEMENT

ಮಾನವೀಯ ಮೌಲ್ಯದ ವಚನಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 7:30 IST
Last Updated 16 ಅಕ್ಟೋಬರ್ 2012, 7:30 IST

ಬೆಳಗಾವಿ: ಹನ್ನೆರಡನೆ ಶತಮಾನದ ಶರಣರು ರಚಿಸಿದ ವಚನಗಳು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು, ಮಾನವನ ಜೀವನವನ್ನು ಸನ್ಮಾರ್ಗದತ್ತ ಒಯ್ಯಲು ಕಾರಣವಾದವು ಎಂದು ಪ್ರಾಧ್ಯಾಪಕಿ ಶ್ರೀದೇವಿ ನರಗುಂದ ಹೇಳಿದರು.

ಇಲ್ಲಿನ ಕಾರಂಜಿಮಠದಲ್ಲಿ ಇತ್ತೀಚೆಗೆ ನಡೆದ 145 ನೇ ಶಿವಾನುಭವಗೋಷ್ಠಿಯಲ್ಲಿ `ವಚನಗಳಲ್ಲಿ ಮಾನವೀಯ ಮೌಲ್ಯಗಳು~ ಎಂಬ ವಿಷಯ ಕುರಿತು ಮಾತನಾಡಿದ ಅವರು, ಶರಣರ ವಚನಗಳಲ್ಲಿ ಮೂಢನಂಬಿಕೆ ತೊಡೆದು ಹಾಕುವ ಹಾಗೂ ಸ್ತ್ರೀ ಸಮಾನತೆ, ಕಾಯಕದ ಮಹತ್ವದ ಬಗ್ಗೆ ಹೇಳಲಾಗಿದೆ. ಜಾತೀಯತೆ, ಮೇಲು-ಕೀಳು ಎಂಬ ಭಾವವನ್ನು ತೊಡೆದು ಹಾಕಿ, ಸರ್ವರಿಗೆ ಸಮಪಾಲು-ಸಮಬಾಳು ಎಂದು ಸಮಾನತೆ ಬಗ್ಗೆ ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಮಾನೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಶರಣರಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ದತ್ತಿ ಇಲಾಖೆ ಉಪ ಆಯುಕ್ತ ರವಿ ಕೋಟಾರಗಸ್ತಿ, ಕಾರಂಜಿಮಠ ನಡೆಸುತ್ತಿರುವ ಶಿವಾನುಭವಗೋಷ್ಠಿಯು ಅರಿವಿನ ಜ್ಯೋತಿ ಬೆಳಗುವ ಕಾರ್ಯದಂತಿದೆ. ಜಂಜಾಟದ ಬದುಕಿನಲ್ಲಿ ನಮಗೆಲ್ಲ ಸನ್ಮಾರ್ಗದಲ್ಲಿ ದಾರಿ ತೋರಿಸುವ ಅನುಭಾವ ಕೇಂದ್ರವಾಗಿದೆ. ಸಾಹಿತಿಗಳಿಗೆ, ಕಲಾವಿದರಿಗೆ, ಆಶ್ರಯ ನೀಡುವ ಹಾಗೂ ಪ್ರೋತ್ಸಾಹಿಸುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ಸ್ವಾಮೀಜಿ, ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ, ಅನಾಚಾರ, ದುರಾಡಳಿತಗಳು ಹೆಚ್ಚಾಗಿವೆ. ಅದೇ ರೀತಿ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ರಂಗದಲ್ಲೂ ಕೂಡ ರಾಜಕೀಯ ಕಂಡುಬರುತ್ತಿದೆ. ಮಾನವೀಯ ಮೌಲ್ಯ ಕುಸಿಯುತ್ತಿದೆ ಎಂದು ವಿಷಾದಿಸಿದರು.

ಶರಣರು, ಸಂತರು ನುಡಿದಂತೆ ನಡೆದು ಹಿರಿಯರ ತತ್ವಗಳನ್ನು ಜೀವನದಲ್ಲಿ ಪಾಲಿಸಬೇಕು. ಮಾತನಾಡುವ ಬದಲು ಕೃತಿಯಲ್ಲಿ ನಡೆಯನ್ನು ತೋರಿಸಬೇಕು ಎಂದು ನುಡಿದರು. ಸಿ.ಜಿ.ಮಠಪತಿ ಸ್ವಾಗತಿಸಿದರು. ಎ.ಕೆ.ಪಾಟೀಲ ನಿರೂಪಿಸಿದರು. ವಕೀಲ ವಿ.ಕೆ.ಪಾಟೀಲ ವಂದಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.