ADVERTISEMENT

ಮಿಶ್ರ ಬೆಳೆಯಾಗಿ ಕಬ್ಬು: ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:45 IST
Last Updated 5 ಫೆಬ್ರುವರಿ 2011, 6:45 IST

ಬೆಳಗಾವಿ: ‘ಕೃಷಿ ಉತ್ಪನ್ನಗಳ ಬೆಲೆ, ಇಳುವರಿ ಹಾಗೂ ಕೃಷಿಕರ ಜೀವನವನ್ನು ಸುಸ್ಥಿರಗೊಳಿಸಬೇಕಾದದ್ದು ಇಂದಿನ ಅವಶ್ಯಕತೆಯಾಗಿದೆ’ ಎಂದು ನಬಾರ್ಡ್‌ನ ವ್ಯವಸ್ಥಾಪಕ ಪ್ರಬಂಧಕ ವಿಲಾಸ ಚಂದ್ರನ್ ಅಭಿಪ್ರಾಯಪಟ್ಟರು.ನಬಾರ್ಡ್ ಹಾಗೂ ಅರ್ಗಾನಿಕ್ ಫುಡ್ ಕ್ಲಬ್ ಆಶ್ರಯದಲ್ಲಿ ಕೈಗೊಂಡಿರುವ ಕಬ್ಬಿನ ಸುಸ್ಥಿರ ಬೇಸಾಯ  ಪದ್ಧತಿಯ ಬಗೆಗೆ ಬೆಳಗಾವಿ ಹಾಗೂ ಹುಕ್ಕೇರಿ ತಾಲ್ಲೂಕಿನ ಪ್ರಾತ್ಯಕ್ಷಿಕ ವೀಕ್ಷಣೆ ನಂತರ ಅವರು ಮಾತನಾಡಿದರು.

‘ಕಬ್ಬನ್ನು ಮಿಶ್ರ ಬೆಳೆಯಲ್ಲಿ ಬೆಳೆಯುವುದರಿಂದ ಆರ್ಥಿಕವಾಗಿ ಅನುಕೂಲವಾಗುತ್ತದೆ. ಆಹಾರ ಉತ್ಪಾದನೆ ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.‘ಸಾವಯವ ಕೃಷಿಯ ಬಗೆಗೆ ತಿಳಿದುಕೊಳ್ಳುವುದರ ಜತೆಗೆ ಅದನ್ನು ಸರಿಯಾದ ಮಾರ್ಗದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಕೃಷಿ ರಂಗದಲ್ಲಿ ಬಂದಿರುವ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು’ ಎಂದು ಅವರು ಸಲಹೆ ಮಾಡಿದರು.

‘ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ. ಸಂಶೋಧನೆಯ ಫಲ ರೈತರನ್ನು ತಲುಪಬೇಕು. ಆ ನಿಟ್ಟಿನಲ್ಲಿ ಮಿಶ್ರ ಬೆಳೆಯಲ್ಲಿ ಕಬ್ಬು ಬೆಳೆಯಲು ಮುಂದೆ ಬಂದ 25 ರೈತರೊಂದಿಗೆ ನಬಾರ್ಡ್ ಕೈಜೋಡಿಸಿದೆ’ ಎಂದು ಅವರು ಹೇಳಿದರು.ನಬಾರ್ಡ್ ಅಧಿಕಾರಿಗಳಾದ ಅಜಯ ಸಾಹು, ಸೂರಿ ಬಾಬು ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಆರ್ಗ್ಯಾನಿಕ್ ಫುಡ್ ಕ್ಲಬ್‌ನ ಅಭಯ ಮುತಾಲಿಕ್ ದೇಸಾಯಿ, ಬಸವರಾಜ ಕಾಪ್ಸಿ ಹಾಗೂ ಅಶೋಕ ತುಬಚಿ ಅವರ ಹೊಲದಲ್ಲಿ ಮಿಶ್ರ ಬೆಳೆ ಕಬ್ಬನ್ನು ವೀಕ್ಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.