ಬೆಳಗಾವಿ: `ಕಂಟೋನ್ಮೆಂಟ್ ಮಂಡಳಿಗೆ ಸೇರಿದ್ದ ನಗರದ ಅಶೋಕ ವೃತ್ತದ ಸಮೀಪದ ಅಕ್ಟ್ರಾಕ್ ನಾಕಾ ಹಳೆಯ ಕಟ್ಟಡದ ವ್ಯಾಪ್ತಿಯ 36.54 ಚದರ ಅಡಿ ಜಾಗದಲ್ಲಿ ರಸ್ತೆ ಅಗಲಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರಕ್ಕೆ ರಕ್ಷಣಾ ಸಚಿವಾಲಯವು ಇದೇ 4ರಂದು ಲಿಖಿತವಾಗಿ ಒಪ್ಪಿಗೆ ನೀಡಿದೆ~ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ.
`ಬೆಳಗಾವಿ ನಗರವು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರದಲ್ಲೊಂದು. ಕೋಟೆ ಕೆರೆಯ ಹತ್ತಿರ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಅಶೋಕ ವೃತ್ತದ ಹತ್ತಿರವಿರುವ ಅಕ್ಟ್ರಾಯ್ ನಾಕಾದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ರಸ್ತೆಯನ್ನು ಅಗಲಗೊಳಿಸಬೇಕಾಗಿತ್ತು.
ಈ ಕಟ್ಟಡವು ಕಂಟೋನ್ಮೆಂಟ್ ಮಂಡಳಿಗೆ ಸೇರಿದ್ದರಿಂದ ರಸ್ತೆ ಅಗಲಗೊಳಿಸುವ ಕಾರ್ಯಕ್ಕೆ ರಕ್ಷಣಾ ಸಚಿವಾಲಯ ಅನುಮತಿ ನೀಡುವುದು ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಅಂಟೋನಿ, ರಕ್ಷಣಾ ಸಹಾಯಕ ಸಚಿವ ಎಂ.ಎಂ. ಪಲ್ಲಮರಾಜು ಹಾಗೂ ರಕ್ಷಣಾ ಕಾರ್ಯದರ್ಶಿಗಳಿಗೆ ಲಿಖಿತವಾಗಿ ನಾನು ಮನವಿ ಸಲ್ಲಿಸಿದ್ದೆ. ಅನೇಕ ಬಾರಿ ಈ ಬಗ್ಗೆ ಖುದ್ದಾಗಿ ಚರ್ಚಿಸಿದ್ದುದರ ಫಲವಾಗಿ ಇದೀಗ ಪರವಾನಗಿ ದೊರೆತಿದೆ~ ಎಂದು ಸಂಸದ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
`ರಕ್ಷಣಾ ಇಲಾಖೆಗೆ ಸೇರಿದ ಅಕ್ಟ್ರಾಯ್ ನಾಕಾ ಹಳೆಯ ಕಟ್ಟಡದ 36. 54 ಚದರ ಅಡಿ ಜಾಗವನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಇದೇ ಅಳತೆಯ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್ ಹೌಸ್ ಹತ್ತಿರದ ಜಾಗೆಯನ್ನು ನೀಡಬೇಕು. ಜೊತೆಗೆ ಅಕ್ಟ್ರಾಯ್ ನಾಕಾ ಹಳೆಯ ಕಟ್ಟಡದ ಮೌಲ್ಯವಾಗಿ ರೂ. 3,93,316 ಪಾವತಿಸಬೇಕು~ ಎಂದು ಅಂಗಡಿ ಮಾಹಿತಿ ನೀಡಿದ್ದಾರೆ.
`ನಗರದ ಅಶೋಕ ವೃತ್ತದ ಹತ್ತಿರ ಸುಗಮ ವಾಹನ ಸಂಚಾರ ಅತಿ ಅವಶ್ಯವಾಗಿದೆ. ಹೀಗಾಗಿ ಜಿಲ್ಲಾಡಳಿತವೂ ಕೂಡಲೇ ರಸ್ತೆ ಅಗಲಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಬೇಕು~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.