ADVERTISEMENT

ರಾಜಕಾರಣಿಗಳಿಗೆ ಸನ್ಮಾರ್ಗ ತೋರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 8:05 IST
Last Updated 4 ಜುಲೈ 2012, 8:05 IST

ರಾಮದುರ್ಗ: ರಾಜಕಾರಣಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ವರ್ತಿಸುತ್ತಿದ್ದಾರೆ. ರಾಜಕಾರಣಿಗಳಿಗೆ ಮಠಾಧೀಶರು ಮಾರ್ಗದರ್ಶನ ನೀಡಿ ಒಳ್ಳೆಯ ಮಾರ್ಗದಲ್ಲಿ ತರಲು ಯತ್ನಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೇಳಿದರು.

ತಾಲ್ಲೂಕಿನ ಎಂ. ಚಂದರಗಿಯ ಗುರುಗಡದೇಶ್ವರ ಸಂಸ್ಥಾನ ಹಿರೇಮಠದಲ್ಲಿ ಮಂಗಳವಾರ `ಗುರು ಪೌರ್ಣಿಮೆ~ ನಿಮಿತ್ತ ನಡೆದ ಶಿವ ಭಕ್ತರ ಸಮಾವೇಶ, `ರೇಣುಕ ಜ್ಯೋತಿ~ ಮಾಸ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಗಣ್ಯರಿಗೆ `ರೇಣುಕ ಜ್ಯೋತಿ~ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ವರ್ಷದ ಹನ್ನೆರಡು ಹುಣ್ಣಿಮೆಗಳು ಸ್ತ್ರೀಯರ ಹಬ್ಬ ಆಚರಣೆಗಾಗಿ ಮೀಸಲಿರುತ್ತವೆ. ಹರಗುರು ಚರಮೂರ್ತಿಗಳು ಆಚರಿಸುವ `ಗುರುಪೌರ್ಣಿಮೆ~ ಗುರುಶಿಷ್ಯರ ಬಾಂಧವ್ಯದ ಆಚರಣೆಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಪಟ್ಟಣ ಮಾತನಾಡಿ, ರಾಜಕಾರಣಿ ಗಳನ್ನು ಕಂಡರೆ ಜನರಲ್ಲಿ ಕೊಳಕು ಮನೋಭಾವನೆ ಮೂಡು ತ್ತಿದೆ. ಪ್ರಾಮಾಣಿಕ ರಾಜಕಾರಣಿಗಳು ಖಾದಿ ತೊರೆಯುವ ಸ್ಥಿತಿ ಎದುರಾಗಿದೆ. ಎಂದು ಹೇಳಿದರು.

ಸಮಾಜದ ವಿವಿಧ ರಂಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಪಟ್ಟಣ, ವೀಶ್ವೇಶರಯ್ಯ ಹಿರೇಮಠ, ಸುವರ್ಣಾದೇವಿ ಹೊಸಮಠ, ಬಿ. ಎಂ. ಸಿದ್ದೇಶ್ವರಯ್ಯೊ, ಬಿ. ಜಿ. ಪಾಟೀಲ, ಶರಣಬಸಪ್ಪ ಮುತ್ಯಾ, ಡಾ. ಲಿಂಗರಾಜ ಅಂಗಡಿ ಹಾಗೂ ಶರಣಪ್ಪ ಬಾಳಪ್ಪ ಅಂಗಡಿ ಅವರಿಗೆ `ರೇಣುಕ ಜ್ಯೋತಿ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಂ. ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.ಭಾಗೋಜಿಕೊಪ್ಪದ ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಗೊಡಚಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹರ್ಲಾಪುರದ ಶಿವಯೋಗಿ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಜಿ.ಪಂ ಮಾಜಿ ಸದಸ್ಯ ಮುಸ್ತಫಾ ದಾವಲಬಾಯಿ, ತಾ.ಪಂ ಉಪಾಧ್ಯಕ್ಷೆ ಲಲಿತಾ ಪಾಟೀಲ, ವಾಲ್ಮೀಕಿ ಸಮಾಜದ ಅಧ್ಯಕ್ಷ, ಉದ್ಯಮಿ ಶ್ರೀನಿವಾಸ, ಮಾಜಿ ಸಚಿವ ಶಿವಾನಂದ ಕೌಜಲಗಿ ಮತ್ತು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಭಾಗವಹಿಸಿದ್ದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ `ಗುರು ಪೌರ್ಣಿಮೆ~ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.