ADVERTISEMENT

‘ರಾಮದುರ್ಗ ಅಭಿವೃದ್ಧಿ; ಚರ್ಚೆಗೆ ಸಿದ್ಧ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 11:34 IST
Last Updated 8 ಮಾರ್ಚ್ 2018, 11:34 IST
ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣವನ್ನು  ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ವಾಕರಸಾಸಂ ಅಧ್ಯಕ್ಷ ಡಂಗನವರ, ಇತರರು ಉಪಸ್ಥಿತರಿದ್ದರು
ರಾಮದುರ್ಗ ತಾಲ್ಲೂಕಿನ ಕೆ.ಚಂದರಗಿಯಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣವನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ವಾಕರಸಾಸಂ ಅಧ್ಯಕ್ಷ ಡಂಗನವರ, ಇತರರು ಉಪಸ್ಥಿತರಿದ್ದರು   

ರಾಮದುರ್ಗ: ’ನಾನು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನೋಡ ಲಾಗದೇ ವಿರೋಧ ಪಕ್ಷದವರು ವೃಥಾ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರ ಅಧಿಕಾರದ ಅವಧಿಯಲ್ಲಿ ಜರುಗಿದ ಕೆಲಸಗಳ ಕುರಿತು ಮಾಹಿತಿ ನೀಡಲಿ, ನಾನೂ ನನ್ನ ಅವಧಿಯಲ್ಲಿ ಜರುಗಿದ ಕಾಮಗಾರಿಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ತಾಲ್ಲೂಕಿನ ಕೆ.ಚಂದರಗಿಯಲ್ಲಿ ಬುಧವಾರ ಸುಮಾರು ₹ 67 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್ ನಿಲ್ದಾಣ ಉದ್ಘಾಟನೆ ಹಾಗೂ ಚಂದರಗಿಯಿಂದ ಹುಲಕುಂದವರೆಗೆ ಸುಮಾರು ₹ 3.5 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೀರಭದ್ರೇಶ್ವರ ಏತ ನೀರಾವರಿಗೆ ಸುಮಾರು ₹ 700 ಕೋಟಿ, ಸಾಲಾಪೂರ ಬಸವೇಶ್ವರ ಏತ ನೀರಾವರಿ ಕಾಮಗಾರಿಗೆ ₹ 540 ಕೋಟಿ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ. ಸಾಕಷ್ಟು ಅಭಿವೃದ್ಧಿ ಮಾಡಿದರೂ ಅದನ್ನು ಸಹಿಸದ ಕೆಲ ವಿರೋಧಿಗಳು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಮ್ಮ ತಾಯಿಯ ಮಹದಾಸೆಯಂತೆ ಶಿವನ ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಮಹಿಳಾ ಸಂಘಗಳ ಸದಸ್ಯರಿಗೆ ಸೀರೆ ನೀಡಿದ್ದೇನೆ. ಹೊರತು, ಬೇರಾವುದೇ ಉದ್ದೇಶದಿಂದ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ‘ಅಶೋಕ ಪಟ್ಟಣ ಅವರು ಮುತವರ್ಜಿ ವಹಿಸಿ ಸುಮಾರು 25 ಗುಂಟೆ ಜಾಗವನ್ನು ಸಂಸ್ಥೆಗೆ ಕೊಡಿಸಿ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.