ADVERTISEMENT

ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 8:41 IST
Last Updated 27 ಡಿಸೆಂಬರ್ 2017, 8:41 IST

ಘಟಪ್ರಭಾ: ನೂತನವಾಗಿ ರಚನೆಗೊಂಡ ಮೂಡಲಗಿ ತಾಲ್ಲೂಕಿಗೆ ಅರಬಾವಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಿರುವುದನ್ನು ಖಂಡಿಸಿ ಮಂಗಳವಾರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಿವಿಧ ಸಂಘಟನೆಯವರು ಹಾಗೂ ಗ್ರಾಮಸ್ಥರು ಅರಬಾವಿ ಮಠದಲ್ಲಿ ಸಂಕೇಶ್ವರ ಗೋಕಾಕ ರಾಷ್ಟ್ರೀಯ ಹೆದ್ದಾರಿ ತಡೆದು ಸುಮಾರು ಎರಡು ಗಂಟೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಿವಾನಂದ ಸ್ವಾಮಿಗಳು ಮಾತನಾಡಿ, ‘ನಮ್ಮ ಗ್ರಾಮದ ಜನರಿಗೆ ಗೋಕಾಕ ಮೂರು ಕಿ.ಮೀ. ದೂರ ಇದೆ. ಮೂಡಲಗಿ 28 ಕಿ.ಮೀ. ದೂರವಿದೆ. ಎಲ್ಲಾ ರೀತಿಯಿಂದ ಅನುಕೂಲವಾಗಿರುವ ಗೋಕಾಕನ್ನು ಬಿಟ್ಟು ದೂರದ ಮೂಡಲಗಿಗೆ ಅರಬಾವಿಯನ್ನು ಸೇರಿಸುತ್ತಿರುವುದು ಖಂಡನೀಯ. ಹಿಂದೆ ಎರಡುಬಾರಿ ನೀಲಿನಕ್ಷೆ ರೂಪಿಸಿದ್ದಾರೆ ರಾಜ್ಯ ಸರ್ಕಾರ ಅರಬಾವಿಯನ್ನು ಮೂಡಲಗಿಗೆ ಸೇರಿಸಿರಲಿಲ್ಲ. ಆದರೆ, ಈಗ ಹೊಸದಾಗಿ ತಯಾರಿಸಿದ ನೀಲಿನಕ್ಷೆಯಲ್ಲಿ ಅಧಿಕಾರಿಗಳು ಮೂಡಲಗಿಗೆ ಸೇರಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಸರ್ಕಾರದ ನಿರ್ಧಾರದಿಂದ ಅರಬಾವಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 16 ಸಾವಿರ ಜನರಿಗೆ ತೊಂದರೆಯಾಗುತ್ತದೆ. ಅರಬಾವಿಯನ್ನು ಗೋಕಾಕಿನಲ್ಲಿಯೇ ಉಳಿಯಬೇಕು’ ಎಂದು ಅವರು ಹೇಳಿದರು. ಈ ಬೇಡಿಕೆ ಈಡೇರಿಸಬೇಕೆಂದು ಪಟ್ಟಣ ಪಂಚಾಯ್ತಿಯ ಎಲ್ಲಾ 16 ಸದಸ್ಯರು ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಗೋಕಾಕ ತಹಶೀಲ್ದಾರ್‌ ಜಿ.ಎಸ್.ಮಾಳಗಿ ಮಾತನಾಡಿ, ‘ಮೂಡಲಗಿಗೆ ಅರಬಾವಿಯನ್ನು ಸೇರಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಇಲ್ಲಿನ ಜನರ ಹಿತದೃಷ್ಠಿಯಿಂದ ಗೋಕಾಕದಲ್ಲಿಯೇ ಅರಬಾವಿ ಉಳಿಯುವಂತೆ ಮಾಡಲು ಕ್ರಮ ಕೈಗೊಳ್ಳತ್ತೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.

ರೈತ ಸಂಘಟನೆ, ಕನ್ನಡಪರ ಸಂಘಟನೆ, ದಲಿತ ಸಂಘಟನೆ ಸ್ಥಳೀಯ ಮುಖಂಡರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಎರಡು ಗಂಟೆ ಕಾಲ ರಸ್ತೆ ತಡೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮೂಡಲಗಿ ಸಿಪಿಐ ಮುರನಾಳ, ಪಿಎಸ್‌ಐ, ಕುಲಗೋಡ ಪಿಎಸ್‌ಐ, ಮೂಡಲಗಿ ಪಿ.ಎಸ್.ಐ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.