ADVERTISEMENT

ವಕೀಲರ ಸಂಘದಿಂದ ಉಪವಾಸ ಸತ್ಯಾಗ್ರಹ ಇಂದಿನಿಂದ

ಬೆಳಗಾವಿಯಲ್ಲಿ ಕೆಎಟಿ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 6:25 IST
Last Updated 4 ಮಾರ್ಚ್ 2014, 6:25 IST

ಬೆಳಗಾವಿ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠವನ್ನು ಬೆಳಗಾವಿಯಲ್ಲಿಯೇ ಸ್ಥಾಪಿಸಲು ಒತ್ತಾ­ಯಿಸಿ ಮಂಗಳವಾರದಿಂದ (ಮಾ. 4) ಉಪವಾಸ ಸತ್ಯಾಗ್ರಹ ಆರಂಭಿಸಲು ಹಾಗೂ ಕೋರ್ಟ್‌ ಕಲಾಪಗಳಿಂದ ದೂರ ಉಳಿಯಲು ಇಲ್ಲಿನ ವಕೀಲರ ಸಂಘದ ಸದಸ್ಯರು ಸೋಮವಾರ ಸಭೆ ನಡೆಸಿ ಒಮ್ಮತದ ನಿರ್ಧಾರ ಕೈಗೊಂಡರು.

ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ಅವರು ಹೋರಾಟ ಕುರಿತು ಸಭೆಯ ನಿರ್ಣಯವನ್ನು ಓದಿ­ದರು. ಸದಸ್ಯರೆಲ್ಲರೂ ಚಪ್ಪಾಳೆ ಮೂಲಕ ನಿರ್ಣಯವನ್ನು ಬೆಂಬಲಿಸಿದರು.

‘ಹೈಕೋರ್ಟ್‌ ಪೀಠ ಸ್ಥಾಪನೆ ಸಂದರ್ಭದಲ್ಲೂ ಬೆಳಗಾವಿ ವಕೀಲರು ಹೋರಾಟ ನಡೆಸಿದ್ದರು. ಧಾರವಾಡ ವಕೀಲರ ಹೋರಾಟಕ್ಕೂ ಬೆಂಬಲ ವ್ಯಕ್ತಪಡಿಸಲಾಗಿತ್ತು. ಎಲ್ಲವೂ ಧಾರವಾಡಕ್ಕೆ ಎಂದರೆ ಸರಿಯಲ್ಲ. ಬೆಳಗಾವಿಯ ಅಭಿವೃದ್ಧಿ ದೃಷ್ಟಿಯಿಂದ ಕೆಎಟಿ ಹಾಗೂ ಕಾರ್ಮಿಕ ನ್ಯಾಯಾ­ಲಯ ಇಲ್ಲಿ ಸ್ಥಾಪನೆಯಾಗಬೇಕು’ ಎಂದು ಆಗ್ರಹಿಸಿದ ಮುಳವಾಡಮಠ ಅವರು, ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯಬಾರದು ಎಂದರು.

ಧಾರವಾಡದಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಆ ಭಾಗದ ಶಾಸಕರು, ಸಚಿವರು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಆದರೆ, ಈ ಜಿಲ್ಲೆಯ ಯಾವೊಬ್ಬ ಶಾಸಕರು, ಸಚಿವರು ಈ ಕುರಿತು ಸದನದಲ್ಲಿ ಮಾತನಾಡಿಲ್ಲ. ಆದ್ದರಿಂದ ಶಾಸಕರು ಹಾಗೂ ಸಚಿವರ ಮನೆಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿಬಂದವು.

‘ಧಾರವಾಡ ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಹಿರೇಮಠ, ಸಚಿವ ಎಚ್‌.ಕೆ.ಪಾಟೀಲ, ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಬೇಕು. ಬೆಳಗಾವಿಯಲ್ಲಿಯೇ ಕೆಎಟಿ ಪೀಠ ಸ್ಥಾಪನೆಗೆ ಒತ್ತಡ ತರಬೇಕು’ ಎಂದು ಸಂಘದ ಮಾಜಿ ಅಧ್ಯಕ್ಷ ಎಸ್‌.ಎಸ್‌. ಕಿವಡಸಣ್ಣವರ ಸಲಹೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ದೇಶಪಾಂಡೆ, ಆರ್‌.ಜಿ. ಪಾಟೀಲ, ವಿ.ಪಿ.ಶೇರಿ, ಎಂ.ಎನ್‌. ಮಾವಿನಕಟ್ಟಿ, ಗುರುರಾಜ ಹುಳ್ಳೇರ, ಆರ್‌.ಸಿ.ಪಾಟೀಲ ಮತ್ತಿತರರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.