ಹುಕ್ಕೇರಿ: ಧಾರ್ಮಿಕ ಕಾರ್ಯದೊಂದಿಗೆ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಸರಬರಾಜು ಮಾಡುವ ಮೂಲಕ ಸ್ಥಳೀಯ ಹಿರೇಮಠದ ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ದಕ್ಷಿಣ ಭಾರತ ಕ್ಷೇತ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಗೋಪಾಲಜೀ ಶ್ಲಾಘಿಸಿದರು.
ಅವರು ಸ್ಥಳೀಯ ಹಿರೇಮಠಕ್ಕೆ ಬಂದಿದ್ದ ಸಂದರ್ಭದಲ್ಲಿ ಶ್ರೀಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಬಹಳಷ್ಟು ಧಾರ್ಮಿಕ ಕೇಂದ್ರಗಳು ಜ್ಞಾನ ದಾಸೋಹದ ಜತೆಗೆ ಅನ್ನದಾಸೋಹ ನಡೆಸುವ ಮೂಲಕ ಧಾರ್ಮಿಕ ಸೇವೆಯ ಜತೆಗೆ ಸಾಮಾಜಿಕ ಸೇವೆಯ ಮುಂಚೂಣಿ ಕೇಂದ್ರಗಳಾಗಿವೆ ಎಂದರು.
27 ವರ್ಷಗಳ ಮೊದಲು ಹುಕ್ಕೇರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟನೆ ಮತ್ತು ಕಾರ್ಯಕ್ರಮಗಳಿಗಾಗಿ ಬರುತ್ತಿದ್ದೆ. ಅದರ ನಂತರ ಇದೀಗ ಬಂದಾಗ ಹುಕ್ಕೇರಿ ಪಟ್ಟಣ ಬಹಳಷ್ಟು ಬದಲಾವಣೆ ಹೊಂದಿರುವುದನ್ನು ಕಂಡು ಮನಸ್ಸಿಗೆ ನೆಮ್ಮದಿ ಮೂಡಿಸಿದೆ ಎಂದರು.
ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದ ಸಂಘಟನೆಗೆ ಹಗಲಿರುಳು ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಇಂತಹ ಮಹನೀಯರಿಂದ ಧರ್ಮ ಸದೃಢವಾಗಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.