ADVERTISEMENT

ವಿರೋಧ ಪಕ್ಷದ ಗೈರಿನಲ್ಲಿ ಕೃಷಿ ಮಾರುಕಟ್ಟೆ ಮಸೂದೆ ಅಂಗೀಕಾರ

ಬೆಳಗಾವಿ ವಿಧಾನಮಂಡಲ ಅಧಿವೇಶನ–2013

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 8:49 IST
Last Updated 5 ಡಿಸೆಂಬರ್ 2013, 8:49 IST

ಸುವರ್ಣ ಸೌಧ (ಬೆಳಗಾವಿ): ಸಭಾತ್ಯಾಗ ಮಾಡಿದ ಬಿಜೆಪಿಯ ಅನುಪಸ್ಥಿತಿಯಲ್ಲಿ ಕೃಷಿ ಮಾರುಕಟ್ಟೆ ಎರಡನೇ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಬುಧವಾರ ಅಂಗೀಕಾರ ನೀಡಿತು.

ವಿಧಾನ ಸಭೆ ಅಂಗೀಕಾರ ನೀಡಿದ ಮಸೂದೆ ಯನ್ನು ಕೃಷಿ ಮಾರುಕಟ್ಟೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಪರಿಷತ್ ನಲ್ಲಿ ಮಂಡಿಸಿದರು.

ಆದರೆ ಮಸೂದೆಯಲ್ಲಿ ರೈತರಿಗೆ ತೊಂದರೆ ಆಗುವಂಥ ಅನೇಕ ಅಂಶಗಳು ಒಳಗೊಂಡಿದ್ದು ಇದಕ್ಕೆ ತಿದ್ದುಪಡಿ ತರಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಕೋರಿದರು.

ಮಸೂದೆಯ ವಿರುದ್ಧ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ, ಸದಸ್ಯರಾದ ಅರುಣ ಶಹಾಪುರ, ಮಹಾಂತೇಶ ಕವಟಗಿಮಠ, ಗಣೇಶ ಕಾರ್ಣಿಕ್ ಹಾಗೂ ಗೋ. ಮಧುಸೂದನ ಮಾತನಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ಶ್ಯಾಮನೂರು ಮಸೂದೆಯಲ್ಲಿ ರೈತರಿಗೆ ಮಾರಕವಾಗುವ ಯಾವುದೇ ಅಂಶಗಳಿಲ್ಲ. ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ ಎಂದರು.

ಆದರೆ ವಿರೋಧ ಪಕ್ಷದ ನಾಯಕರು ಇದನ್ನು ಒಪ್ಪದೆ ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ, ಹೇಗಾದರೂ ಮಾಡಿ ರೈತರಿಗೆ ತೊಂದರೆ ಮಾಡಬೇಕೆಂಬುದೇ ಸರ್ಕಾರದ ಉದ್ದೇಶ ಎಂದು ಹೇಳಿ ಸಭಾತ್ಯಾಗ ಮಾಡಿದರು.

ಜವಳಿ ಪಾರ್ಕ್ ಗೆ ಜಮೀನು ಕೊರತೆ
ಜಮೀನು ಕೊರತೆಯಿಂದಾಗಿ ಬೆಳಗಾವಿ ಜಿಲ್ಲೆಯ ವಾಘವಡೆ ಮತ್ತು ಬೆಕ್ಕಿನಕೇರಿಯಲ್ಲಿ ಜವಳಿ ಪಾರ್ಕ್ ನಿರ್ಮಿಸುವ ಯೋಜನೆಗೆ ಹಿನ್ನಡೆಯಾಗಿದೆ ಎಂದು ತಿಳಿಸಿದ ಜವಳಿ ಸಚಿವ ಬಾಬುರಾವ್ ಚಿಂಚನಸೂರ ಜಮೀನು ಲಭಿಸಿದರೆ ತಕ್ಷಣ ಪಾರ್ಕ್ ನಿರ್ಮಿಸಲು ಮುಂದಾಗುವುದಾಗಿ ಭರವಸೆ ನೀಡಿದರು.

ಬಿಜೆಪಿಯ ಮಹಾಂತೇಶ ಕವಠಗಿಮಠ ಅವರು ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬೆಳಗಾವಿ ಜಿಲ್ಲೆಯ ಬೋರಗಾಂವ್ ಗ್ರಾಮದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಬೇಕಾದ ಜಮೀನು ಸ್ವಾಧೀನಕ್ಕೆ ಸಂಬಂಧಿಸಿ ಈಗಾಗಲೇ ಪ್ರಕಟಣೆನು ನೀಡಲಾಗಿದೆ ಎಂದು ತಿಳಿಸಿದರು.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ನೇಕಾರರು ಇದ್ದಾರೆ. ಅವರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸದೇ ಇದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಸಾಧ್ಯತೆ ಇದೆ. ಇದನ್ನು ಮನಗಂಡ ಹಿಂದಿನ ಸರ್ಕಾರ ಜವಳಿ ಪಾರ್ಕ್ ನಿರ್ಮಿಸಲು ಮುಂದಾಗಿತ್ತು. ಆದರೆ ಇದರ ಕೆಲಸ ಇನ್ನೂ ಆರಂಭವಾಗಲಿಲ್ಲ ಎಂದು ಕವಟಗಿಮಠ ಅವರು ಹೇಳಿದ್ದರು.

ದೊಡ್ಡಬಳ್ಳಾಪುರ, ಗುಲ್ಬರ್ಗ, ಹಿರಿಯೂರು, ತುಮಕೂರು, ಯಾದಗಿರಿಯಲ್ಲಿ ಜವಳಿ ಪಾರ್ಕ್ ನಿರ್ಮಿಸುವ ಯೋಜನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.