ADVERTISEMENT

`ವೀರಶೈವ ಮಠಗಳ ಕೊಡುಗೆ ಅಪಾರ'

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 10:09 IST
Last Updated 8 ಡಿಸೆಂಬರ್ 2012, 10:09 IST

ಬೆಳಗಾವಿ: `ವೀರಶೈವ ಸಮಾಜ     ಮುಂದುವರಿಯಬೇಕಾಗಿದೆ. ನಾವೆಲ್ಲರೂ ಒಂದೇ ಎಂದು ಒಗ್ಗಟ್ಟಿನಿಂದ ನಾಯಕರು ಕೆಲಸ ಮಾಡಬೇಕು' ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ಡಾ.ಶಿವಬಸವ ಸ್ವಾಮೀಜಿ 123ನೇ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ನಾಗನೂರು ಶಿವಬಸವ ಸ್ವಾಮೀಜಿ ಪ್ರಸಾದ ನಿಲಯಗಳ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ  ಮಾತನಾಡಿದರು.

`ಎಲ್ಲರ ಮನಸ್ಸು, ಒಂದೇ ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದಲ್ಲಿ ವೀರಶೈವ ಸಮಾಜ ಮುಂದುವರಿಯಲು ಸಾಧ್ಯ. ಸಮಾಜದ ಉನ್ನತಿಗೆ ವೀರಶೈವ ಮಠಗಳು ನೀಡಿದ ಕೊಡುಗೆ ಅನುಪಮವಾಗಿದೆ. ಉತ್ತರ ಕರ್ನಾಟಕ ಮಠಗಳು ಶೈಕ್ಷಣಿಕವಾಗಿ ನೀಡಿದ ಕೊಡುಗೆ ಅವಿಸ್ಮರಣೀಯ. ದಕ್ಷಿಣ ಕರ್ನಾಟಕದಲ್ಲೂ ವೀರಶೈವ ಮಠಮಾನ್ಯಗಳು ಅಪಾರ ಕೊಡುಗೆ ನೀಡಿವೆ. ಸರ್ಕಾರ ಮಾಡಬೇಕಿದ್ದ ಕೆಲಸಗಳನ್ನು ಈ ಮಠಗಳು ಮಾಡಿವೆ' ಎಂದು ಹೇಳಿದರು.

`ವೀರಶೈವ ಸಮಾಜ ಕೇವಲ ಲಿಂಗಾಯತರಿಗೆ ಮಾತ್ರ ಸೀಮಿತವಾಗದೇ, ಎಲ್ಲ ಸಮಾಜಗಳಿಗೆ ಸೇವೆ ಸಲ್ಲಿಸುತ್ತಿದೆ. ವೀರಶೈವ ಮಹಾಸಭೆಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡವರಿಗೆ ಸಹಾಯ ಹಸ್ತ ನೀಡುತ್ತಿದೆ' ಎಂದು ಅವರು ಹೇಳಿದರು.
`ಭಕ್ತಿ ದರ್ಶನ' ಕೃತಿಯನ್ನು ಬಿಡುಗಡೆಗೊಳಿಸಿದ ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, `ವಿನೋದಾ ಭಾವೆ ಅವರು ಭೂದಾನ ಚಳವಳಿ ಮೂಲಕ ಬಡವರಿಗೂ ಭೂಮಿ ದೊರಕಿಸಿಕೊಡುವ ಮೂಲಕ ಬಡವರೂ ಸ್ವಾವಲಂಬಿಯಾಗಿ ಬದುಕುವಂತೆ ಮಾಡಿದರು' ಎಂದು ಹೇಳಿದರು.

`ಸಾಹಿತ್ಯ ಹೂವು ಇದ್ದಂತೆ. ಅದರ ಜ್ಞಾನದ ಕಂಪು ಎಲ್ಲ ಕಡೆ ಪಸರಿಸಬೇಕು. ನಾಗನೂರು ಮಠ ಪುಸ್ತಕ ಸಂಸ್ಕೃತಿ ಮತ್ತು ಗಡಿಭಾಗದಲ್ಲಿ ಕನ್ನಡ ಗಟ್ಟಿಗೊಳಿಸಲು ಯತ್ನಿಸುತ್ತಿದೆ' ಎಂದರು.

ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು, `ಬೆಳಗಾವಿ ಗಂಡು ಮೆಟ್ಟಿದ ಸ್ಥಳ. ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಹುಟ್ಟಿದ ನಾಡು. ನಾಗನೂರು ನಾಗಮ್ಮ ಬ್ರಿಟಿಷ್ ಅಧಿಕಾರಿಗೆ ಚಪ್ಪಲಿ ಏಟು ನೀಡಿದ್ದಳು' ಎಂದು ಬಣ್ಣಿಸಿದರು.
`ಶಿವಬಸವ ಸ್ವಾಮೀಜಿ ಜಾತ್ಯತೀತವಾಗಿ ವಿದ್ಯಾರ್ಥಿನಿಲಯ ನಡೆಸಿ ಶಿಕ್ಷಣ ಪ್ರಸಾರ ಮಾಡಿದ್ದರು. ಪುಸ್ತಕ ಬರಿ ಬಿಡುಗಡೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ಅದನ್ನು ಜನರು ಓದಿದಾಗಲೇ ಅದು ನಿಜವಾಗಿ ಬಿಡುಗಡೆ ಮಾಡಿದಂತಾಗುತ್ತದೆ' ಎಂದರು.

ವಿ.ಡಿ. ರಾಚಾನಾಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಮಠದ ಸಿದ್ಧರಾಮ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಪ್ರೊ. ಎಂ.ಆರ್. ಉಳ್ಳೇಗಡ್ಡಿ, ಡಾ. ಕರ ವೀರಪ್ರಭು ಕ್ಯಾಲಕೊಂಡ, ಎನ್.ಬಿ. ಪಾಟೀಲ, ಲೆಫ್ಟಿ ನೆಂಟ್ ಕರ್ನಲ್ ವೈ.ಡಿ. ಸಣ್ಣಮ್ಮನವರ ಹಾಜರಿದ್ದರು. ಶತಾ ಯುಷಿ ಉದ್ಯಮಿ ಗುರುಪುತ್ರಪ್ಪ ಗುರು    ಪಾದಪ್ಪ ದೊಡವಾಡ, ಜಾನಪದ ಕಲಾವಿದ ಸೋಮಲಿಂಗಪ್ಪ ದೊಡ ವಾಡ, ಬಸವಣ್ಣೆಯ್ಯ ಸಾಸಯ್ಯ ಮಠ ಪತಿ ಅವರನ್ನು ಸನ್ಮಾನಿಸಲಾಯಿತು. `ಲಿಂಗಾಯತಧರ್ಮ ಪರಿಚಯ' ಗ್ರಂಥ ಬಿಡುಗಡೆ ಮಾಡಲಾಯಿತು.

ಅರ್ಜಿ ಆಹ್ವಾನ
ಬೆಳಗಾವಿ:
  ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಅಪ್ರಂಟಿಸಿಸ್ (ಶಿಶುಕ್ಷ ತರಬೇತಿ) ತರಬೇತಿಗಾಗಿ ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿ ಸಲಾಗಿದೆ. ಫಿಟ್ಟರ್, ಟರ್ನರ್, ಮಷಿ ನಿಸ್ಟ್, ಇಲೆಕ್ಟ್ರೀಶಿಯನ್, ವೆಲ್ಡರ್, ಪಾಸಾ, ಫೌಂಡ್ರಿ ಮ್ಯೋನ್, ಕಾರ್ಪೆಂ ಟರ್, ಶೀಟ್ ಮೆಟಲ್ ವರ್ಕರ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಮಾಹಿತಿ ಗಾಗಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಸದಾಶವಿನ ನಗರ ಕಚೇರಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.