ಸವದತ್ತಿ: "ನೀವು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ನಾವು ಟೀಕೆಗೆ ಒಳಗಾಗಬೇಕಾಗಿದೆ’ ಎಂದು ಶಾಸಕ ಆನಂದ ಮಾಮನಿ ಅಧಿಕಾ
ರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಯಲ್ಲಮ್ಮ ಪುರಸಭೆಯಲ್ಲಿ 2018–19 ನೇ ಸಾಲಿನ ಹಣಕಾಸು ಯೋಜನೆಯ ಮೂಲ ಅನುದಾನದ ಹಾಗೂ ಎಸ್.ಎಫ್.ಸಿ ಮುಕ್ತ ನಿಧಿಯ ಕ್ರಿಯಾ ಯೋಜನೆ ತಯಾರಿಸುವ ಕುರಿತು ಬುಧವಾರ ನಡೆದ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಅವರು ಮಾತನಾಡಿದರು.
‘ವಿರೋಧ ಪಕ್ಷದ ಸದಸ್ಯರ ಗೈರು ಹಾಜರಿಯಲ್ಲಿಯೇ ಸಭೆ ನಡೆಸುವುದು ಎಷ್ಟು ಸೂಕ್ತ, ನಿಮ್ಮದು ಇಂಥದೇ ಕೆಲಸ, ಒಂದಾದರೂ ಗುಣಮಟ್ಟದ, ಸರಿಯಾದ ಕೆಲಸ ಮಾಡಿರೇನೂ ?’ ಎಂದು ಶಾಸಕರು ಪ್ರಶ್ನಿಸಿದರು.
‘ಕುಡಿಯುವ ನೀರನ್ನು ಎತ್ತುವ ಯಂತ್ರಗಳ ಬೆಲೆ ಎಷ್ಟು, ರಿಪೇರಿ ಮಾಡಿದ ವೆಚ್ಚ ಎಷ್ಟು? ಎಂಬ ಪ್ರಶ್ನೆಗೆ ಅದರ ಅಧಿಕೃತ ಹಣ ಇಷ್ಟೇ ಎಂದು ಅಧಿಕಾರಿಗಳು ಹೇಳಲಿಲ್ಲ. ಇತ್ತೀಚೆಗೆ ಮಾಡಿದ ಕೆಲಸದ ಬಗ್ಗೆ ಸರಿಯಾದ ವಿವರಣೆ ಇಲ್ಲದೆ ಸಭೆಗೆ ಬಂದಿರಲ್ಲ. ನೀವೂ ಭಾರಿ ಅಧಿಕಾರಿಗಳು ನೀವು’ ಎಂದು ಎಂಜನಿಯರ್ ಅವರನ್ನು ತರಾಟೆಗೆ ತಗೆದುಕೊಂಡರು.
ಘನತ್ಯಾಜ್ಯ ಘಟಕ ವಿಲೇವಾರಿ ಅಭಿವೃದ್ಧಿಗೆ ₹ 25 ಲಕ್ಷ ಇದೆ ಎಂದು ಅಧಿಕಾರಿಗಳು ಹೇಳಿದಾಗ ಮತ್ತೆ ಮಾತನಾಡಿದ ಶಾಸಕ ಮಾಮನಿ ‘ಈ ಘಟಕಕ್ಕೆ ಜಾಗ ಖರೀದಿಸಿ 13 ವರ್ಷವಾಯಿತು. ಇಷ್ಟು ವರ್ಷ ಮಾಡಿದ ವೆಚ್ಚ ಎಲ್ಲ ವ್ಯರ್ಥ, ಅಲ್ಲಿ ಸಾವಯವ ಗೊಬ್ಬರ ತಯಾರಿಸುತ್ತೇವೆ ಎಂದಿದ್ದೀರಿ, ಅದು ಇಲ್ಲ. ಮತ್ತೆ ಇನ್ನೂ ಅಭಿವೃದ್ಧಿಗೇ ಹಣ ಹಾಕುವುದರಲ್ಲಿಯೇ ಇದ್ದೀರಿ’ ಎಂದು ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
‘ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ರಿಯಾ ಯೋಜನೆ ತಯಾರಿಸಿದ್ದಾರೆ ಎಂಬುವುದನ್ನು ಶಾಸಕ ಆನಂದ ಮಾಮನಿ ಒತ್ತಿ ಹೇಳಿದರು. ಸದಸ್ಯರಾದ ರಾಜಶೇಖರ ಕಾರದಗಿ, ಸುಭಾಸ ರಜಪೂತ ಮಧ್ಯ ಪ್ರಶ್ನಿಸಿದರು. ಮುಖ್ಯಾಧಿಕಾರಿ ಕೆ.ಐ. ನಾಗನೂರ ಮೌನವಾಗಿದ್ದರು.
ಪುರಸಭೆ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಮೌಲಾಸಾಬ ತಬ್ಬಲಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಪಂಚಪ್ಪ ಅಲಬನ್ನವರ, ಸದಸ್ಯರಾದ ರಾಜಶೇಖರ ಕಾರದಗಿ, ಸುಭಾಸ ರಜಪೂತ, ವೀರಪ್ಪ ಅಮಾಸಿ, ಬಸವರಾಜ ಜಗ್ಗಲಿ. ಸುಶೀಲಾ ಶಿಂತ್ರಿ, ಅಂಬಿಕಾ ನವಲೆ, ಬಸಮ್ಮ ಅಮಾತೆನ್ನವರ, ಸುನಂದಾ ಆಯಟ್ಟಿ, ಕಸ್ತೂರಿ ಮೇಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.