ADVERTISEMENT

‘ಶಿಸ್ತುಬದ್ಧ ಚುನಾವಣೆ ಕಾರ್ಯ ನಡೆಸಿ’

ಉಪವಿಭಾಗ ಮಟ್ಟದ ಚುನಾವಣಾಧಿಕಾರಿಗಳಿಗೆ ಕಳಸದ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 9:56 IST
Last Updated 28 ಮಾರ್ಚ್ 2018, 9:56 IST

ಬೈಲಹೊಂಗಲ: ‘ಎಲ್ಲ ಅಧಿಕಾರಿಗಳು, ಸಿಬ್ಬಂದಿ ಚುನಾವಣಾ ಕೆಲಸಗಳನ್ನು ಶಿಸ್ತುಬದ್ಧವಾಗಿ, ಸುವ್ಯವಸ್ಥಿತವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಅಂಜುವ ಅಗತ್ಯತೆ ಇಲ್ಲ. ಮೇಲಾಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ಧೈರ್ಯದಿಂದ ಚುನಾವಣಾ ಕಾರ್ಯ ಮಾಡಬೇಕು’ ಎಂದು ಬೆಳಗಾವಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಹೇಳಿದರು.

ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣಾ-2018ರ ಹಿನ್ನಲೆಯಲ್ಲಿ ಬೈಲಹೊಂಗಲ ಉಪವಿಭಾಗದ ಅರಭಾವಿ, ಗೋಕಾಕ, ಕಿತ್ತೂರ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ಹಾಗೂ ರಾಮದುರ್ಗ ವಿಧಾನಸಭಾ ಮತಕ್ಷೇತ್ರಗಳ ಎಲ್ಲ ಸೆಕ್ಟರ್ ಆಫೀಸರ್, ಪ್ಯಾಯಿಂಗ್ ಸ್ಕ್ಯಾಡ್, ಅಂಕಿ ಅಂಶಗಳ ಕಣ್ಗಾವಲು ತಂಡ (ಎನ್ಎನ್ಟಿ), ವಿಡಿಯೋಗ್ರಾಫರ್ ತಂಡ (ವಿಎನ್ಟಿ) ಎಮ್ಸಿಸಿ ನೋಡಲ್ ಅಧಿಕಾರಿಗಳು ಹಾಗೂ ಇತ್ಯಾದಿ ತಂಡಗಳಿಗೆ ಮಂಗಳವಾರ ತರಬೇತಿ ನೀಡಿ ಮಾತನಾಡಿದರು.

‘ಮಾ.27ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ನಿರೀಕ್ಷಣಾ ಮಂದಿರ, ಸರ್ಕಿಟ್ ಹೌಸ್‌ಗಳನ್ನು ರಾಜಕೀಯ ಪಕ್ಷದವರು ಚುನಾವಣಾ ಕೆಲಸಕ್ಕೆ ಬಳಸುವಂತಿಲ್ಲ. ಇನ್ಮುಂದೆ ಕಾಮಗಾರಿ ಮುಗಿದರೆ ಉದ್ಘಾಟನೆ. ಹೊಸ ಕಾಮಗಾರಿ ಭೂಮಿ ಪೂಜೆ ಮಾಡುವಂತಿಲ್ಲ. ಅಭ್ಯರ್ಥಿಗಳು ಗೆದ್ದರೆ ನಿಮಗೆ ಜನತಾ ಮನೆ ನಿರ್ಮಿಸಿ ಕೊಡುತ್ತೇನೆ. ಸಾಲಮನ್ನಾ ಮಾಡುತ್ತೇನೆ ಎಂಬ ಭರವಸೆ ನೀಡುವಂತಿಲ್ಲ. ಮತದಾರರಿಗೆ ಹಣ, ಸಾರಾಯಿ ವಿತರಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಮತದಾನದ ಸಮಯದಲ್ಲಿ ಪಕ್ಷದವರು ಮತದಾರರ ಹೆಸರಿನ ಮಾಹಿತಿ ಪ್ಲೇನ್ ಪೇಪರ್‌ದಲ್ಲಿ ಮಾಡಿಸಬೇಕು. ಅದರಲ್ಲಿ ಪಕ್ಷದ ಚಿಹ್ನೆ ಹಾಕಬಾರದು’ ಎಂದರು.

ADVERTISEMENT

ಅಬಕಾರಿ ಇಲಾಖೆ ಬೆಳಗಾವಿ ಡಿಸಿ ಅರುಣಕುಮಾರ ಮಾತನಾಡಿ, ‘ಚುನಾವಣೆಯಲ್ಲಿ ಅಬಕಾರಿ ಇಲಾಖೆ ಪಾತ್ರ ಪ್ರಮುಖವಾಗಿದೆ. ಮತದಾರರು ಮದ್ಯದ ಅಮಿಷಕ್ಕೆ ಒಳಗಾಗಬಾರದು. ಅಕ್ರಮ ಸಾರಾಯಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಕೊಳ್ಳಲಾಗುವುದು. ಮದ್ಯ ಸ್ಟಾಕ್ ಮಾಡಿದ ಉಗ್ರಾಣದ ಮಾಲೀಕ, ಸಾಗಾಟ ಮಾಡುವ ವಾಹನ ಜಪ್ತಿ ಮಾಡಿ ಮುಟ್ಟುಗೋಲು ಹಾಕಲಾಗುವುದು. ಸ್ಥಳದಲ್ಲಿ ಏನೇ ಜಪ್ತಿ ಮಾಡಿದರೂ ವಿಡಿಯೋ ಮಾಡಿ ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಲಾಗುವುದು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅಂಗಡಿಗಳಿದ್ದರೆ ಸಾರ್ವಜನಿಕರಿಂದ ದೂರು ಬಂದರೆ 10 ದಿನಗಳ ಕಾಲ ಮದ್ಯದ ಅಂಗಡಿ ಬಂದ್ ಮಾಡಲಾಗುವುದು’ ಎಂದು ಹೇಳಿದರು.

ಡಿವೈಎಸ್ಪಿ ನಾಗರಾಜ, ಆದಾಯ ತೆರಿಗೆ ನೋಡಲ್ ಅಧಿಕಾರಿ ಶಕೀಲ ಅಹ್ಮದ್, ವಾಣಿಜ್ಯ ತೆರಿಗೆ ಇಲಾಖೆಯ ಡಿಸಿ ಕೆ.ಬಿ.ಕೆಂಗಾರ, ವಾಣಿಜ್ಯ ತೆರಿಗೆ ಇಲಾಖೆಯ ಎಸಿ ಕೆ.ಬಿ.ಕುಲಕರ್ಣಿ, ಉಪವಿಭಾಗಾಧಿಕಾರಿ ಡಾ.ವಿಜಯಕುಮಾರ ಹೊನಕೇರಿ, ಬೈಲಹೊಂಗಲ ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಜಿ.ಎಂ.ಕರುಣಾಕರಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಚಿಕ್ಕೋಡಿ ಆರ್.ಡಿ.ಕಾಲೇಜಿನ ಉಪನ್ಯಾಸಕ ಎನ್.ವಿ.ಶಿರಗಾಂವಕರ, ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್‌ ಎಸ್.ಬಿ.ಕರಬಸಪ್ಪಗೋಳ, ಜಿಲ್ಲಾ ನೋಡಲ್ ಅಧಿಕಾರಿಗಳಾದ ಪ್ರವೀಣ ಬಾಗೇವಾಡಿ, ಪ್ರಭಾರ ಉಪವಿಭಾಧಿಕಾರಿ ಸಿದ್ರಾಮೇಶ್ವರ, ಗೋಕಾಕ ತಹಶೀಲ್ದಾರ್ ಜಿ.ಎಸ್.ಮಳಗಿ, ಕಿತ್ತೂರ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ಮಂಜುನಾಥ, ಪಿಎಸ್ಐ ಸುಮಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.