ಬೈಲಹೊಂಗಲ: ತಾಲ್ಲೂಕಿನ ಬುಡರಕಟ್ಟಿ ಗ್ರಾಮದ ಗ್ರಾಮ ದೇವತೆಯರ ಹಾಗೂ ಗುರು ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆ ಅಂಗವಾಗಿ ಗ್ರಾಮ ದೇವತೆಯರಿಗೆ, ಗುರು ಬಸವೇಶ್ವರ ಮೂರ್ತಿಗೆ ವಿವಿಧ ಪೂಜೆ, ಪುಷ್ಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ನೂರಾರು ಭಕ್ತರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಗ್ರಾಮದ ಎಲ್ಲ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಪೂಜೆ ಪುನಸ್ಕಾರ ನಡೆದವು. ಸಾಮೂಹಿಕ ವಿವಾಹ, ಮಹಾಪ್ರಸಾದ ಸೇವೆ ನಡೆದವು.ಭಕ್ತರು ಹರಹರ ಮಹಾದೇವ, ಗುರು ಬಸವೇಶ್ವರ ಮಹಾರಾಜಕಿ ಜೈ ಎಂದು ಘೋಷಣೆ ಮೊಳಗಿಸಿ ರಥೋತ್ಸವ ಎಳೆದರು.ಶ್ರದ್ಧೆ, ಭಕ್ತಿಯಿಂದ ಹೂವು, ಹಣ್ಣು, ಕಾರಿಕು ಸಮರ್ಪಿಸಿದರು. ಸಕಲ ವಾದ್ಯಮೇಳದೊಂದಿಗೆ ಸಾಗಿದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು.ಜಾತ್ರೆಯಲ್ಲಿ ಡೊಳ್ಳಿನ ಪದ, ಭಜನಾ ಸ್ಪರ್ಧೆ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.28ರಂದು ಗ್ರಾಮದೇವತೆಯರಿಗೆ ಉಡಿ ತುಂಬುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಂಕರ ಮಂಗಳಗಟ್ಟಿ, ಯುವಕರಾದ ನಾಗರಾಜ ಗಾಣಿಗೇರ, ಪ್ರವೀಣ ಅಡಕಿ, ಮುತ್ತು ಪೂಜೇರ, ಮಂಜು ಕುರುಬರ, ಈರಣ್ಣ ಸುಳ್ಳೇದ, ಶ್ರೀಕಾಂತ ತಡಕೋಡ, ಪ್ರಕಾಶ ಗಾಣಿಗೇರ, ಶಿವಾನಂದ ಬಾರ್ಕಿ, ಮುತ್ತು ಸವಟಗಿ, ಗಂಗಪ್ಪ ಕುಂಬಾರ ಜಾತ್ರೆ ಯಶಸ್ಸಿಗೆ ಶ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.