ADVERTISEMENT

ಸಂಸ್ಕೃತ ಶಿಕ್ಷಕರ ಹುದ್ದೆ ಭರ್ತಿಗೆ ಅನುಮತಿ

ಬೆಳಗಾವಿ ವಿಧಾನಮಂಡಲ ಅಧಿವೇಶನ–2013

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:48 IST
Last Updated 7 ಡಿಸೆಂಬರ್ 2013, 8:48 IST

ಸುವರ್ಣ ಸೌಧ (ಬೆಳಗಾವಿ): ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸಂಸ್ಕೃತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಪಡೆಯಲಾಗಿದ್ದು ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಗಣೇಶ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಶುಕ್ರವಾರ ಲಿಖಿತ ಉತ್ತರ ನೀಡಿದ ಸಚಿವರು ೩೪೦೭ ಶಿಕ್ಷಕರ ಹುದ್ದೆ ಗಳನ್ನು ಈಗಾಗಲೇ ತುಂಬಲಾಗಿದ್ದು  ಇದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕರೂ ಒಳಗೊಂಡಿದ್ದಾರೆ, ೧೧೩೭ ಹುದ್ದೆ ಗಳನ್ನು ತುಂಬಲು ಅನುಮತಿ ಸಿಕ್ಕಿದ್ದು ಇದರಡಿಯಲ್ಲೂ ಸಂಸ್ಕೃತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗು ವುದು ಎಂದು ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಪ್ರೌಢಶಾಲೆ ಗಳಲ್ಲಿ ೮೯ ಮತ್ತು ಅನುದಾನಿತ ಶಾಲೆಗಳಲ್ಲಿ ೧೮೬ ಮಂದಿ ಸಂಸ್ಕೃತ ಶಿಕ್ಷಕರಿದ್ದಾರೆ. ಸರ್ಕಾರಿ ಕಾಲೇಜು ಗಳಲ್ಲಿ ೪೫ ಮತ್ತು ಅನುದಾನಿತ ಕಾಲೇಜುಗಳಲ್ಲಿ ೬೬ ಮಂದಿ ಉಪ ನ್ಯಾಸಕರು ಇದ್ದಾರೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ೧೨ ಮತ್ತು ಅನುದಾನಿತ ಶಾಲೆಗಳಲ್ಲಿ ೫೦, ಸರ್ಕಾರಿ ಕಾಲೇಜುಗಳಲ್ಲಿ ೧೦ ಹಾಗೂ ಅನುದಾನಿತ ಕಾಲೇಜುಗಳಲ್ಲಿ ೧೫ ಮಂದಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದ್ದಾರೆ.

೨೭೭೪ ಕಾಲೇಜು ಮಾನ್ಯತೆ ನವೀಕರಣ ಬಾಕಿ: ರಾಜ್ಯದಲ್ಲಿ ಒಟ್ಟು ೨೭೭೪ ಅನುದಾನಿತ ಮತ್ತು ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆ ನವೀಕರಣ ಬಾಕಿ ಇದೆ ಎಂದು ಶಿಕ್ಷಣ ಸಚಿವರು ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.

ಬಿಜೆಪಿಯ ತಾರಾ ಅನುರಾಧಾ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು ಕಳೆದ ಎರಡು ವರ್ಷಗಳಿಂದ ಮಾನ್ಯತೆ ನವೀಕರಣ ಪ್ರಕ್ರಿಯೆ ನಡೆಯ ಲಿಲ್ಲ, ಹೀಗಾಗಿ ೭೭೩ ಅನುದಾನಿತ ಮತ್ತು ೨೦೦೧ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆ ನವೀರಣ ಆಗಬೇಕಾಗಿದೆ, ಇದಕ್ಕಾಗಿ ಈ ಕಾಲೇಜುಗಳಿಂದ ಒಟ್ಟು  ₨ ೬,೧೯,೩೩,೫೦೦ ಪಡೆಯಲಾಗಿದೆ, ಮಾನ್ಯತೆ ನವೀಕರಣ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದ್ದು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗು ವುದು ಎಂದು ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು (೮೪) ಮತ್ತು ಯಾದಗಿರಿ ಜಿಲ್ಲೆ ಯಲ್ಲಿ ಅತಿ ಕಡಿಮೆ (೩) ಅನುದಾನಿತ ಕಾಲೇಜುಗಳು ಮಾನ್ಯತೆ ನವೀಕರಿಸ ಬೇಕಾಗಿದ್ದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಹೆಚ್ಚು (೨೪೨) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಕಡಿಮೆ (೨೨) ಅನುದಾನ ರಹಿತ ಕಾಲೇಜುಗಳು ನವೀಕರಣ ಆಗಬೇಕಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.