ADVERTISEMENT

ಸರ್ಕಾರಿ ಕಚೇರಿಗಳಿಗೆ ಬೀಗ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಹೋರಾಟ ತೀವ್ರಗೊಳಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 5:58 IST
Last Updated 3 ಮಾರ್ಚ್ 2018, 5:58 IST
ಬಿ.ಆರ್.ಸಂಗಪ್ಪಗೋಳ
ಬಿ.ಆರ್.ಸಂಗಪ್ಪಗೋಳ   

ಚಿಕ್ಕೋಡಿ: ‘ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ 25 ದಿನಗಳಿಂದ ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪ
ಗೋಳ ಎಚ್ಚರಿಕೆ ನೀಡಿದರು.

ಧರಣಿ ಸ್ಥಳದಲ್ಲಿ ಮಾತನಾಡಿದ ಬಿ.ಆರ್.ಸಂಗಪ್ಪಗೋಳ, ‘ಧರಣಿಗೆ ಜನಪ್ರತಿನಿಧಿಗಳು, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ. ಆದರೆ, ಸರ್ಕಾರದಿಂದ ಇದುವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಗುರುವಾರ ಶ್ರೀಶೈಲ ಪೀಠದ ಚನ್ನಸಿದ್ಧರಾಮ ಸ್ವಾಮೀಜಿ, ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿ ನೇತ್ರತ್ವದಲ್ಲಿ 20ಕ್ಕೂ ಹೆಚ್ಚು ಮಠಾಧೀಶರು ಬೀದಿಗಳಿದು ಹೋರಾಟ ನಡೆಸಿದ್ದಾರೆ. ಸರ್ಕಾರ ಈ ಭಾಗದ ಜನಸಾಮಾನ್ಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡ ತ್ಯಾಗರಾಜ್ ಕದಂ, ‘ನಿಯೋಜಿತ ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯ್ತಿಗಳು ಗ್ರಾಮ ಸಭೆಯಲ್ಲಿ ಚಿಕ್ಕೋಡಿ ಜಿಲ್ಲೆ ಆಗಬೇಕು ಎಂದು ಠರಾವು ಪಾಸು ಮಾಡಿ ಜಿಲ್ಲಾ ಹೋರಾಟ ಸಮಿತಿಗೆ ಸಲ್ಲಿಸಬೇಕು. ಈ ಭಾಗದ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮಲಗೌಡ ನೇರ್ಲಿ, ದಲಿತ ಮುಖಂಡ ಶೇಖರ್ ಪ್ರಭಾತ್, ಜೆಡಿಎಸ್‌ ಮುಖಂಡ ಅಣ್ಣಾಸಾ ಪಾಟೀಲ, ನಿಪ್ಪಾಣಿ ಹಾಲ ಶುಗರ್ಸ್ ಮಾಜಿ ಸಂಚಾಲಕ ಸುರೇಶ ಬ್ಯಾಕುಡೆ, ತುಕಾರಾಂ ಕೋಳಿ, ಸುಭಾಷ ಕರೋಲಿ, ಗುಳ್ಳಪ್ಪಾ ನಾಯಿಕ, ಬಸಗೌಡ ರಾಜಗೌಡರ, ಮಹಾನಿಂಗ ನಾಯಿಕ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.