ಬೆಳಗಾವಿ: `ಕೇವಲ ಬರಹಗಾರರ ಪುಸ್ತಕಗಳ ಬಿಡುಗಡೆ ಆದರೆ ಸಾಲದು. ಅವರ ಸಾಹಿತ್ಯ ಕೃತಿಗಳ ಸಮಗ್ರ ಮೌಲ್ಯ ಮಾಪನ, ಸಮೀಕ್ಷೆ ನಡೆಯಬೇಕು. ಯಾವುದೇ ಒಬ್ಬ ಲೇಖಕನ ಕೊಡುಗೆ ಏನು ಎನ್ನುವುದು ಎಲ್ಲರಿಗೂ ತಿಳಿಯುವಂತಾಗಬೇಕು' ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪುಂಡಲೀಕ ಪಾಟೀಲರ ಏಳು ಕೃತಿಗಳನ್ನು ಬಿಡುಗಡೆ ಮಾಡಿದ ಅವರು, ಪುಸ್ತಕಗಳನ್ನು ಅಲಕ್ಷಿಸುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಭೀಮಸೇನ ತೊರಗಲ್, ಶಿಕ್ಷಕರು, ಪತ್ರಕರ್ತರು, ಸಾಹಿತಿಗಳು ಎಲ್ಲರೂ ಸಮಾಜಕ್ಕೆ ಶಿಕ್ಷಣ ನೀಡುವವರೇ ಆಗಿದ್ದಾರೆ. ಅವರು ತಮ್ಮ ತಮ್ಮ ಮಾಧ್ಯಮಗಳ ಮೂಲಕ ಆ ಶಿಕ್ಷಣ ನೀಡಬಲ್ಲರು ಎಂದು ಹೇಳಿದರು.
ಪುಂಡಲೀಕ ಪಾಟೀಲರ `ಸೇಡು ಮತ್ತು ಶಾಂತಿ' ಕಾದಂಬರಿ ಕುರಿತು ಡಾ. ಕೆ.ಎನ್. ದೊಡ್ಡಮನಿ, `ಸಂಕ್ರಾಂತಿ' ಕವನ ಸಂಕಲನದ ಕುರಿತು ಶ್ವೇತಾ ನರಗುಂದ, `ಕೃತಿ ತಿರುಳು', `ಬಡವರ ಬಿಡುಗಡೆ' ವಿಮರ್ಶೆ ಹಾಗೂ ನಾಟಕಗಳ ಕುರಿತು ಎಲ್.ಎಸ್. ಶಾಸ್ತ್ರಿ ಹಾಗೂ ಮೂರು ಮಕ್ಕಳ ಕೃತಿಗಳ ಕುರಿತು ವಿ.ಎಂ. ಬೇವಿನಕೊಪ್ಪಮಠ ಮಾತನಾಡಿದರು.
ಸುನಂದಾ ಮುಳೆ ಪ್ರಾರ್ಥಿಸಿದರು. ಕೃತಿಕಾರ ಪುಂಡಲೀಕ ಪಾಟೀಲ ಸ್ವಾಗತಿ ಸಿದರು. ಬಿ. ನಿಂಗರಾಜ ವಂದಿಸಿದರು. ಪಿ.ಬಿ. ಸ್ವಾಮಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.