ADVERTISEMENT

`ಸಿದ್ಧೇಶ್ವರ ಸ್ವಾಮೀಜಿ ಎಲ್ಲರಿಗೂ ಆದರ್ಶ'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 8:19 IST
Last Updated 6 ಡಿಸೆಂಬರ್ 2012, 8:19 IST

ಬೈಲಹೊಂಗಲ: ಮಾತನಾಡಿದಂತೆ ನಡೆಯುವ ಮೂಲಕ ಸಿದ್ಧೇಶ್ವರ ಸ್ವಾಮೀಜಿ ಅವರ ಸರಳ ಜೀವನದ ಆದರ್ಶಗಳು ಜಗತ್ತಿಗೆ ಮಾದರಿಯಾಗಿವೆ ಎಂದು ಮುರಗೋಡ ಮಹಾಂತ ದುರದುಂಡೀಶ್ವರಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ಜೈ ಕರ್ನಾಟಕ ಯುವಕ ಸಂಘ ಹಾಗೂ ಆಧ್ಯಾತ್ಮ ಪ್ರವಚನ ಸೇವಾ ಸಮಿತಿ ವತಿಯಿಂದ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಬುಧವಾರ ತಿಂಗಳ ಪರ್ಯಂತ ವಿಜಾಪುರ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅದ್ಧೂರಿ, ಆಡಂಬರವಿಲ್ಲದೇ ನಿರಾಭಾರಿಯಾಗಿ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಂಡಿರುವ ಶ್ರಿಗಳು ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯತೆ ಮೌಲ್ಯಗಳನ್ನು ಸರಳ ನುಡಿಯಲ್ಲಿ ತಿಳಿಹೇಳುವ ಪ್ರಭುತ್ವ ಸಾಧಿಸಿದ್ದಾರೆ ಎಂದರು.

ತಿಂಗಳ ಪರ್ಯಂತ ಪ್ರವಚನ ಕೇಳುವ ಮೂಲಕ ಪ್ರತಿಯೊಬ್ಬರೂ ಒತ್ತಡ ಜೀವನದಿಂದ ಹೊರಬಂದು, ತ್ಯಾಗ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಬೆಳಗಾವಿ ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ, ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಹೊಸೂರ ಮಡಿವಾಳೇಶ್ವರಮಠ ಗಂಗಾಧರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರಮಠ ಚಿದಾನಂದ ಸ್ವಾಮೀಜಿ, ಮಲ್ಲೂರ ಓಂಕಾರ ಆಶ್ರಮದ ನಿಶ್ಚಲ ಸ್ವರೂಪ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಯಾತ್ರೆಯ ವಿಶೇಷತೆಯನ್ನು ವಿವರಿಸಿದರು.

ಯಕ್ಕುಂಡಿ ಪಂಚಾಕ್ಷರ ಸ್ವಾಮೀಜಿ, ಮೂರು ಸಾವಿರಮಠದ ನೀಲಕಂಠ ದೇವರು, ಸುಖದೇವ ಸ್ವಾಮೀಜಿ, ಸದಾಶಿವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಹಾಗೂ ದಾವಣಗೆರೆಯ ಸುಶೀಲಮ್ಮ ಅಜ್ಜಂಪುರಶೆಟ್ಟರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ವಿಶ್ವನಾಥ ಪಾಟೀಲ, ಮಾಜಿ ಸಚಿವ ಶಿವಾನಂದ ಕೌಜಲಗಿ, ಡಾ. ವಿ.ಎಸ್. ಸಾಧುನವರ, ಡಿ.ಜಿ. ಮಲ್ಲೂರ, ಸಹಜಾನಂದ ಬೋಗಾರ, ಸುರೇಶ ಮೆಟಗುಡ್ಡ, ಈರಣ್ಣ ಜವಳಿ, ಆನಂದ ವಾಲಿ, ಚಿದಾನಂದ ಹೂಲಿ ಸೇರಿದಂತೆ ಉಭಯ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
  
ಆನಂದ ಬಡಿಗೇರ ಪ್ರಾರ್ಥಿಸಿದರು. ಸೇವಾ ಸಮಿತಿ ಅಧ್ಯಕ್ಷ ಉಮೇಶ ಮುಪ್ಪಯ್ಯನವರಮಠ ಸ್ವಾಗತಿಸಿದರು. ಪ್ರೇಮಾ ಅಂಗಡಿ ನಿರೂಪಿಸಿದರು. ವಿಜಯ ಪತ್ತಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.