ADVERTISEMENT

ಸೊಳ್ಳೆಗಳ ಹಾವಳಿ: ರೋಗದ ಭೀತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 10:23 IST
Last Updated 14 ಸೆಪ್ಟೆಂಬರ್ 2013, 10:23 IST
ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿ ಸಂಗ್ರಹವಾದ  ಕೊಳಚೆ ನೀರು
ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿ ಸಂಗ್ರಹವಾದ ಕೊಳಚೆ ನೀರು   

ರಾಯಬಾಗ: ತಾಲ್ಲೂಕಿನ ಕುಡಚಿ ಪಟ್ಟಣದ ಅಲ್ಲಲ್ಲಿ ರಸ್ತೆ ಮೇಲಿನ ನಿಂತ ನೀರು ಚರಂಡಿಗೆ ಹೋಗದೆ ರಸ್ತೆ ಮಧ್ಯೆ ಭಾಗದಲ್ಲಿ ನಿಂತು ಕೊಳಚೆಯಾಗಿ ಗಬ್ಬು ನಾರುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ವಿಪರೀತ­ವಾಗಿ ಪಟ್ಟಣದಲ್ಲಿ ಡೆಂಗೆ ಸೇರಿದಂತೆ ಇತರ ಜ್ವರದ ಭೀತಿಯುಂಟಾಗಿದೆ ಎಂದು  ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವರಾಜ ಬುಸುಗುಂಡೆ ಹೇಳಿದ್ದಾರೆ.

ಪಟ್ಟಣದಲ್ಲಿ ಸರಿಯಾಗಿ  ಫಾಗಿಂಗ್‌ ಮಾಡದೇ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಲ್ಲಿ ಪಟ್ಣಣದಲ್ಲಿ ಇಬ್ಬರಿಗೆ ಡೆಂಗೆ ಜ್ವರ ಬಂದಿದ್ದು ಅವರು ಸೆ.3ರಿಂದ 9ರ ವರೆಗೆ ಕೆ.ಎಲ್‌.ಇ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸಾವಕ್ಕ ಮಹಾದೇವ ಶಿರೋಳ (50) ಕೀರ್ತಿ ಶಿರೋಳ (2)ಚಿಕಿತ್ಸೆ ಪಡೆದು­ಕೊಂಡವರು ಎಂದು  ಅವರ ಕುಟುಂಬದವರು  ದೃಢಪಡಿಸಿದ್ದಾರೆ.

ಈ ಬಗ್ಗೆ ಗುರುವಾರ ಸಂಜೆ ‘ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಯವರು ತಮ್ಮ ಮನೆಗೆ ಭೇಟಿ ನೀಡಿ ಹೋಗಿದ್ದಾರೆ’ ಎಂದು ರವಿ ಶಿರೋಳ ಹೇಳಿದರು.

’ನೂತನವಾಗಿ ಬಂದಿರುವ ಮುಖ್ಯಾಧಿಕಾರಿಗಳಿಗೆ ಪಟ್ಟಣದ ಆರೋಗ್ಯ ಹಾಗೂ ಸ್ವಚ್ಚತೆಯ ಬಗ್ಗೆ ಕಾಳಜಿ ಇಲ್ಲ. ಅವರ ನಿರ್ಲಕ್ಷದಿಂದಾಗಿ ಪಟ್ಟಣದಲ್ಲಿ ಅಲ್ಲಲ್ಲಿ ಕೊಳಚೆ ತುಂಬಿದೆ. ಅದರಲ್ಲೂ ಒಂದೆನೆಯ ವಾರ್ಡ್‌ ಬಳಿ ವಾಲ್ಮಿಕಿ ದೇವಸ್ಥಾನದ
ಬಳಿ ರಸ್ತೆ ಮೇಲಿನ ಕೊಳಚೆಯಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ. ಸದರಿ ಕೊಳಚೆಯನ್ನು ತೆಗೆದು ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅನೇಕ ಬಾರಿ ಸದಸ್ಯರು ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಅಲ್ಲದೆ ತಾವು ಬೇಸತ್ತು ಪಟ್ಟಣ ಪಂಚಾಯ್ತಿ ಸದಸ್ಯ­ತ್ವಕ್ಕೆ ರಾಜಿನಾಮೆ ಕೊಟ್ಟಿದ್ದೆ’ ಎಂದು ಮಾಜಿ ಸದಸ್ಯರೊಬ್ಬರು ಹೇಳಿದರು.

ಪಟ್ಣಣದಲ್ಲಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿಲ್ಲ. ರಸ್ತೆ ಮೇಲಿನ ನೀರು ಸರಿಯಾಗಿ ಚರಂಡಿಯಲ್ಲಿ ಹರಿಯದೆ ರಸ್ತೆ ಮಧ್ಯ ಭಾಗದಲ್ಲಿ ನಿಂತು ಕೊಳಚೆಯಾಗುತ್ತದೆ.

ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿ­ಗಳನ್ನು ಸಂಪರ್ಕಿಸಿದಾಗ ಕುಡಚಿ ಪಟ್ಟಣದಲ್ಲಿ ಡೆಂಗೆ ಜ್ವರದ ಬಗ್ಗೆ ತಮಗೆ ಮಾಹಿತಿ ಇಲ್ಲ. ಹಾಗೇನಾದರೂ ಇದ್ದರೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಆದ್ದರಿಂದ ಇನ್ನಾದರೂ ಮುಖ್ಯಾಧಿಕಾರಿಗಳು ಸಮಸ್ಯೆಯ ಬಗ್ಗೆ ಗಮನ ಹರಿಸಿ ಚರಂಡಿ ಸ್ವಚ್ಚಗೊಳಿಸಿ ಕೊಳಚೆ ನೀರು ನಿಲ್ಲದಂತೆ ಸೊಳ್ಳೆಗಳ ನಿರ್ಮೂಲನೆಗೆ ಫಾಗಿಂಗ್‌ ವ್ಯವಸ್ಥೆ ಮಾಡಲಿ ಎಂಬುದು  ಪಟ್ಟಣದ ನಾಗರಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.