ಹುಕ್ಕೇರಿ: ಹಿಂದಿನ ಕಾಲದಲ್ಲಿ ಯಾರಿಗೂ ಬೇಡವಾದವರು ರಂಗ ಭೂಮಿ ಪ್ರವೇಶಿಸಿಸುತ್ತಿದ್ದರು. ಮಹಿಳೆಯರಂತೂ ರಂಗ ಭೂಮಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ವಿದ್ಯಾವಂತ ಮಹಿಳೆಯರು ಕೂಡಾ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿ ಪರದೆಗೆ ಬರುತ್ತಿದ್ದಾರೆ ಎಂದು ನಟಿ ಉಮಾಶ್ರೆ ಅಭಿಪ್ರಾಯ ಪಟ್ಟರು.
ಅವರು ಸ್ಥಳೀಯ ಗುರುಶಾಂತೇಶ್ವರ ಕಲಾಪೋಷಕ ಸಂಘದ ಪ್ರಥಮ ವಾರ್ಷಿಕೋತ್ಸವ ಹಾಗೂ ಶ್ರೆ ಗುರುಶಾಂತೇಶ್ವರ ಸದ್ಭಾವನಾ ಪ್ರಶಸ್ತಿ ಹಾಗೂ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಕಲಾವಿದರು ತಮ್ಮ ಕಲೆಯ ಮೂಲಕ ಪ್ರೇಕ್ಷಕರನ್ನು ಒಲಿಸಿ ಕೊಳ್ಳುವರು. ಆದರೆ ಕಲಾವಿದರ ಬದುಕು ಪರದೆಯ ಮೇಲೆ ಇರುವ ಹಾಗೆ ವಾಸ್ತವದಲ್ಲಿ ಇರುವುದಿಲ್ಲ ಎಂಬ ಗಂಭೀರ ವಿಚಾರವನ್ನು ವ್ಯಕ್ತಪಡಿಸಿದ ಅವರು ಕಲಾವಿದರನ್ನು ಕೀಳರಿಮೆ ಯಿಂದ ನೋಡಬೇಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಉಮಾಶ್ರೆ ಅವರು ಕಲಾವಿದರಷ್ಟೇ ಅಲ್ಲಾ ಹೋರಾಟಗಾರರು ಕೂಡಾ. ನೇಕಾರರ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಅವರು ಸಾಕಷ್ಟು ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ, ಇಂದು ಕಲಾವಿದರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಅವರಲ್ಲಿಯ ಕಲೆ ಕಮರಿ ಹೋಗುತ್ತಿದೆ. ಮಾನಸಿಕವಾಗಿ ಅವರಿಗೆ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಅವರು ರಾಜಕೀಯ ಪ್ರವೇಶಿಸುತ್ತಿರುವ ವಿಷಾದನೀಯ ಎಂದರು.
ಸನ್ಮಾನ: ಗೋಕಾಕ ಭಾವ ಸಂಗಮ ಅಧ್ಯಕ್ಷ ನರೇಂದ್ರ ಪುರಂದರೆ, ಯಕ್ಸಂಬಾದ ವಿಜ್ಞಾನ ಶಿಕ್ಷಕ ಎಸ್. ಆರ್.ಡೊಂಗರೆ, ಸುರೇಬಾನದ ಜಾನಪದ ಕಲಾವಿದ ಸಿದ್ದು ಮೋಟೆ ಹಾಗೂ ಹುಕ್ಕೇರಿಯ ಜಾನಪದ ಕಲಾ ವಿದ ಬೀರಪ್ಪಾ ಗೋಟೂರೆ, ಚಿತ್ರಕಾರ ಎಲ್.ಎಸ್.ಕಾಳಿ ಅವರಿಗೆ ಗುರು ಶಾಂತೇಶ್ವರ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ತಹಶೀಲ್ದಾರ ಸಯೀದಾ ಆಫ್ರೀನ ಬಾನು ಬಳ್ಳಾರಿ, ಸಂಕೇಶ್ವರ ಡಿ.ಇಡಿ ಕಾಲೇಜಿನ ಅಧ್ಯಕ್ಷ ನಾಗಪ್ಪ ಕರಜಗಿ, ತಾ.ಪಂ.ಇಒ ಎ.ಬಿ. ಪಟ್ಟಣಶೆಟ್ಟಿ, ಹಿರಾ ಶುಗರ್ ಎಂ.ಡಿ. ಅಶೋಕ ಪಾಟೀಲ, ಪ.ಪಂ. ಮಾಜಿ ಅಧ್ಯಕ್ಷೆ ಕುಮಾರಿ ವಾಗ್ದೇವಿ ತಾರಳಿ ಮತ್ತು ಪ.ಪಂ.ಸದಸ್ಯ ಮಹಾವೀರ ನಿಲಜಗಿ ಹಾಜರಿದ್ದರು.
ಸುಭಾಷ ನಾಯಿಕ ಸ್ವಾಗತಿಸಿದರು. ಶಿವಾನಂದ ಝಿರ್ಲಿ ಪರಿಚಯಿ ಸಿದರು. ಸಿ.ಎಂ.ದರಬಾರೆ ಮತ್ತು ಬಿ.ಎಸ್. ಪಾಟೀಲ ನಿರೂಪಿಸಿದರು. ನಿರ್ದೇಶಕ ಸೂರ್ಯಕಾಂತ ಚಿಕ್ಕೋಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.