ADVERTISEMENT

ಸ್ವಚ್ಛಗೊಳ್ಳದ ‘ಗಿಂಡೆ ಬಂಗಿ ಬೋಳ’

ಆರ್‌.ಎಲ್‌.ಚಿಕ್ಕಮಠ
Published 27 ನವೆಂಬರ್ 2017, 6:24 IST
Last Updated 27 ನವೆಂಬರ್ 2017, 6:24 IST
ಬೆಳಗಾವಿ ನಗರದ ಗಿಂಡೆ ಬೋಳದಲ್ಲಿ ಬಿದ್ದಿದ್ದ ಕಸದ ರಾಶಿ
ಬೆಳಗಾವಿ ನಗರದ ಗಿಂಡೆ ಬೋಳದಲ್ಲಿ ಬಿದ್ದಿದ್ದ ಕಸದ ರಾಶಿ   

ಬೆಳಗಾವಿ: ಸ್ಮಾರ್ಟ್‌ ಸಿಟಿ ಮಧ್ಯದಲ್ಲಿರುವ ‘ಗಿಂಡೆ ಬಂಗಿ ಬೋಳ’ ಸುತ್ತಲಿನ ಪರಿಸರದಲ್ಲಿ ಕಸದ್ದೇ ಸಾಮ್ರಾಜ್ಯ. ಸುತ್ತಲೂ ಕಟ್ಟಡಗಳು, ವ್ಯಾಪಾರಿ ಮಳಿಗೆಗಳು, ಸಮಾದೇವಿ ಮಂದಿರ, ಹನುಮಾನ ಮಂದಿರಗಳು, ಸರಸ್ವತಿ ಬುಕ್‌ ಸ್ಟಾಲ್‌, ಸ್ವೀಟ್‌ ಮಾರ್ಟ್‌ಗಳು, ಅನೇಕ ಆಸ್ಪತ್ರೆಗಳ ನಡುವೆ ಇರುವ ಈ ‘ಗಿಂಡೆ ಬಂಗಿ ಬೋಳ’ದಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

ರಾಮದೇವ ಗಲ್ಲಿಯ ಬಾಂಬೆ ಡೈಯಿಂಗ್‌ ಬಟ್ಟೆ ಮಳಿಗೆ ಹಿಂಭಾಗದಿಂದ ಪಶ್ಚಿಮ ಮುಖವಾಗಿ ಸಾಗುವ ಈ ಸಣ್ಣ ರಸ್ತೆ ಧರ್ಮವೀರ ಸಂಭಾಜಿ ವೃತ್ತದಲ್ಲಿರುವ ವೈಶಾಲಿ ಬಾರ್‌ ಬಳಿ ಸೇರುತ್ತದೆ. ರಸ್ತೆಯುದ್ದಗಲಕ್ಕೆ ತ್ಯಾಜ್ಯ ಎಸೆಯಲಾಗಿರುತ್ತದೆ. ಅದರಲ್ಲಿಯೂ ಮುಖ್ಯವಾಗಿ ರಾಮದೇವ ಗಲ್ಲಿಯಿಂದ ಆರಂಭದ ಬಟ್ಟೆ ಅಂಗಡಿ ಬಳಿ ತ್ಯಾಜ್ಯ ಬಿದ್ದಿರುವುದು ಕಂಡುಬಂತು.

ಸುತ್ತಲೂ ಸುಂದರವಾಗಿ ಕಾಣುವ ರಾಮದೇವ ಗಲ್ಲಿ, ಖಡೇಬಜಾರ್‌, ಕಿರ್ಲೋಸ್ಕರ್‌ ರಸ್ತೆ ಮಧ್ಯದ ಈ ಕೇಳ್ಕರ್‌ಬಾಗ್‌ ಚಿಕ್ಕ ಚಿಕ್ಕ ಅಡ್ಡ ರಸ್ತೆಗಳ ಪ್ರದೇಶ. ಇಲ್ಲಿಯ ಬಹುತೇಕ ಅಡ್ಡರಸ್ತೆಗಳ ಸ್ಥಿತಿ ಒಂದೇ ಆಗಿದ್ದರೂ ಮುಖ್ಯಬಂಗಿ ಬೋಳ ಮಾತ್ರ ತ್ಯಾಜ್ಯದ ಗುಂಡಿಯಂತಾಗಿದೆ. ಸುತ್ತಲಿನ ಆಸ್ಪತ್ರೆಯವರು, ಅಂಗಡಿಯವರು ಕಸಕಡ್ಡಿಗಳನ್ನು, ಮನೆಗಳ ತ್ಯಾಜ್ಯವನ್ನೆಲ್ಲ ಇಲ್ಲಿಯೇ ಬಿಸಾಕುತ್ತಾರೆ. ಆದ್ದರಿಂದ ಇಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸ್ಥಳೀಯರಾದ ಸುಧಾಕರ ಜಾಧವ ಹೇಳಿದರು.

ADVERTISEMENT

ರೋಗ ಹರಡುತ್ತಿದೆ: ಈ ತ್ಯಾಜ್ಯದಿಂದಾಗಿ ಇಡೀ ಪ್ರದೇಶ ಮಲಿನಗೊಂಡಿದೆ. ಗಟಾರದಲ್ಲಿ ಕೊಳಚೆ ನೀರು ತುಂಬಿದೆ. ತ್ಯಾಜ್ಯವು ರಸ್ತೆಯಲ್ಲೆಲ್ಲ ಹರಡಿರುತ್ತದೆ. ನಾಯಿಗಳು, ದನಗಳು, ಮುಂಗುಸಿ ಗಳು, ಇಲಿಗಳ ಕಾಟ ಜಾಸ್ತಿಯಾಗಿವೆ. ಸೊಳ್ಳೆಗಳು, ನೊಣಗಳ ಹಾವಳಿಗೆ ನಿವಾಸಿಗಳು ಬೇಸತ್ತಿದ್ದಾರೆ.

ಪಾಲಿಕೆ ನಿರ್ಲಕ್ಷ್ಯ: ಇಲ್ಲಿ ಉಂಟಾಗುವ ತ್ಯಾಜ್ಯ ಎತ್ತಲು ನಿರಂತರ ವಾಹನ ಒದಗಿಸಬೇಕು. ತ್ಯಾಜ್ಯವನ್ನು ನೇರವಾಗಿ ಹಾಕಲು ವಾಹನಗಳನ್ನು ನಿಲ್ಲಿಸಬೇಕು. ನಿತ್ಯ ಸೊಳ್ಳೆ ನಿವಾರಣೆಗೆ ಫಾಗಿಂಗ್‌ ಮಾಡಬೇಕು ಎಂದು ಅನೇಕ ಸಲ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರಮೋದ ನಿಂಬಾಳ್ಕರ ದೂರಿದರು.

‘ಗಿಂಡೆ ಬೋಳದಲ್ಲಿ ನಿತ್ಯ ಮೂರು ಸಲ ದೊಡ್ಡ ವಾಹನದಲ್ಲಿ ತ್ಯಾಜ್ಯ ಎತ್ತಿ, ಪೌಡರ್‌ ಹಾಕಲಾಗುತ್ತದೆ. ಸುತ್ತಲೂ ಮೂತ್ರಾಲಯಗಳು ಇಲ್ಲದಿರುವುದರಿಂದ ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದೂ ಇದೆ. ಎಳೆ ನೀರಿನ ಬೊಂಡ, ಕಬ್ಬಿನ ಸಿಪ್ಪೆ, ಬಾಳೆ ಗೊನೆ, ಆಸ್ಪತ್ರೆ ತ್ಯಾಜ್ಯ, ಅಂಗಡಿಗಳ ತ್ಯಾಜ್ಯವನ್ನು ಇಲ್ಲಿಗೆ ಅಕ್ರಮವಾಗಿ ಹಾಕುತ್ತಾರೆ. ಅನೇಕ ಸಲ ಮನವಿ ಮಾಡಿದರೂ ಸಾರ್ವಜನಿಕರು ಸಹಕರಿಸುತ್ತಿಲ್ಲ’ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಟಿ. ಉದಯಕುಮಾರ ಹೇಳಿದರು.

* * 

ಈ ಭಾಗದಲ್ಲಿ ಕಸ ಹಾಕುವವರು, ಎಸೆಯುವವರ ಗುರುತಿಸಲು ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ
ಉದಯಕುಮಾರ ಟಿ. ಪರಿಸರ ಅಧಿಕಾರಿ, ನಗರಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.