ADVERTISEMENT

ಸ್ವಾವಲಂಬನೆಯಿಂದ ಗ್ರಾಮೀಣ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:40 IST
Last Updated 3 ಸೆಪ್ಟೆಂಬರ್ 2011, 6:40 IST

ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಸರಕಾರ ಜಾರಿಗೊಳಿಸುವ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಂಡು ಸ್ವಾವಲಂಬನೆಯತ್ತ ಸಾಗಬೇಕು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ತಾಲ್ಲೂಕಿನ ಇಟ್ನಾಳ, ಡೋಣವಾಡ, ಬಂಬಲವಾಡ, ಕರೋಶಿ, ಮುಗಳಿ, ವಡ್ರಾಳ ಮುಂತಾದ ಗ್ರಾಮಗಳಲ್ಲಿ ಒಟ್ಟು 50.50 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು ಮಾತನಾಡುತ್ತಿದ್ದರು.

ರಸ್ತೆ ಕಾಮಗಾರಿಗಳ ಗುಣಮಟ್ಟದ ಉಸ್ತುವಾರಿಯನ್ನು ಆಯಾ ಗ್ರಾಮಸ್ಥರು ವಹಿಸಿಕೊಂಡು ಉತ್ತಮವಾದ ರಸ್ತೆಗಳನ್ನು ನಿರ್ಮಿಸಿಕೊಳ್ಳಬೇಕು. ಕಾಮಗಾರಿ ಕಳಪೆಮಟ್ಟದಿಂದ ನಡೆಯದಂತೆ ಮುಂಜಾಗೃತೆ ವಹಿಸಬೇಕು ಎಂದು ಹೇಳಿದರು.

ಜಿ.ಪಂ ಸದಸ್ಯ ಮಹೇಶ ಭಾತೆ, ತಾ.ಪಂ ಅಧ್ಯಕ್ಷ ಬಾಜಿರಾವ ಮಾದಿಗ, ಸದಸ್ಯ ಬಾಳಪ್ಪಾ ಬಾನಿ, ಬಿ.ಎಸ್. ಮಾಳಿಂಗೆ, ಸಂತ್ರಾಮ ಕುಂಡ್ರುಕ್, ಮುರಿಗೆಪ್ಪಾ ಅಡಿಸೇರಿ, ದುಂಡಪ್ಪಾ ಬೆಂಡವಾಡೆ, ಲಕ್ಷ್ಮಣ ಪೂಜಾರಿ, ಅಜೀತ ಪಾಟೀಲ, ಅಣ್ಣಾಸಾಹೇಬ ಘರಬುಡೆ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವಿ.ಬಿ. ಸಂಗಪ್ಪಗೋಳ ಉಪಸ್ಥಿತರಿದ್ದರು.

ಪರಿಶ್ರಮದಿಂದ ಸಾಧನೆ
ಜೀವನದಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಕಠಿಣ ಪರಿಶ್ರಮ ವಹಿಸುವ ವ್ಯಕ್ತಿ ಖಂಡಿತವಾಗಿಯೂ ಯಶಸ್ಸಿನ ಗುರಿ ತಲುಪುತ್ತಾನೆ ಎಂದು ಕೆವಿಜಿ ಬ್ಯಾಂಕ್‌ನ ಮಾಂಜರಿ ಶಾಖಾ ವ್ಯವಸ್ಥಾಪಕ ಡಿ.ಜಿ. ನರಗುಂದ ಹೇಳಿದರು.

ತಾಲ್ಲೂಕಿನ ಮಾಂಜರಿ ಗ್ರಾಮದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ನಬಾರ್ಡ ಮತ್ತು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಸರ್ವೋದಯ ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕ ಡಿ.ಎ. ತಾಂಬಟ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ನಿಖಿತಾ ಇಂಗಳೆ ಮತ್ತು ಅಂಜಲಿ ಪೀರಾಜೆ ಪ್ರಥಮ ಸ್ಥಾನ, ಸರ್ವೋದಯ ಶಿಕ್ಷಣ ಸಂಸ್ಥೆಯ ಸ್ಮೃತಿ ದಿಲೀಪ ದಾಬೋಳೆ ಮತ್ತು ರಾಮಚಂದ್ರ ಬೋಸಲೆ ದ್ವಿತೀಯ ಹಾಗೂ ಆರ್.ಡಿ.ಎಸ್ ಶಿಕ್ಷಣ ಸಂಸ್ಥೆಯ ಓಂಕಾರ ಅಪ್ಪಾಸಾಹೇಬ ದೇಸಾಯಿ ಮತ್ತು ಸುಹಾಸ ಲೋಕರೆ ತೃತೀಯ ಬಹುಮಾನ ಪಡೆದುಕೊಂಡರು. ಆರ್.ಎಸ್. ಶಿಂಗೆ ಸ್ವಾಗತಿಸಿದರು. ಎಸ್.ಎ. ಗಾವಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.