ಹುಕ್ಕೇರಿ: ಮೂರು ವರ್ಷಕ್ಕೊಮ್ಮೆ ಪಟ್ಟಣದ ಲಕ್ಷ್ಮಿ ದೇವಿ ಜಾತ್ರೆಯು ಮಾರ್ಚ್ 13ರಿಂದ ಐದು ದಿನಗಳ ಕಾಲ ಜರುಗಲಿದೆ. ತನ್ನಿಮಿತ್ತ ಪಟ್ಟಣ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ರಹವಾಸಿಗಳು ತಮ್ಮ ತಮ್ಮ ಮನೆಗೆ ಬಣ್ಣ ಬಳಿದು ಸಿಂಗರಿಸಿದ್ದಾರೆ. ಜಾತ್ರೆಯನ್ನು ನೋಡಲು ಸ್ಥಳೀಯರ ಬೀಗರು ಸೇರಿದಂತೆ ಹೊರಗಿನಿಂದ ಸಾವಿರಾರು ಜನರು ಆಗಮಿಸುವರು.
ಶುಕ್ರವಾರ ದೇವಿಗೆ ಕಾಯಿ ಇಡುವ ಮೂಲಕ ಮತ್ತು ಹಕ್ಕುದಾರರ ಮನೆಗೆ ಕೋಣಿನ ಮೆರವಣಿಗೆ ಕೊಂಡೊಯ್ಯವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಗೌಡ ಪಾಟೀಲ, ಸಮಿತಿ ಅಧ್ಯಕ್ಷ ಸಂಜಯ ನಾಯಿಕ, ಪಂಚರು, ಹಕ್ಕುದಾರರನ್ನು ಒಳಗೊಂಡು ಪಟ್ಟಣದ ಗಣ್ಯ ನಾಗರಿಕರು ಪಾಲ್ಗೊಂಡಿದ್ದರು.
ಮಾ.13ರಂದು ಬೆಳಿಗ್ಗೆ ಹಕ್ಕುದಾರರು ಮತ್ತು ಪಂಚರು ದೇವಿಯನ್ನು ಉಯ್ಯಾಲಿಸಿ (ಹೊನ್ನಾಟ) ಪ್ರತಿಷ್ಠಾಪನೆ ಮಾಡುವರು. ಅಲಂಕೃತ ದೇವಿಮೂರ್ತಿಯನ್ನು ವಿವಿಧ ಓಣಿಗಳಲ್ಲಿ ಉಯ್ಯಾಲಿಸುವರು. ಮಾ.14ರಂದು ಬೆಳಗಿನ ಜಾವ ತೇರಿನಲ್ಲಿ ಆಸೀನಳಾಗುವಳು.
ಹೊನ್ನಾಟದ ಮೆರವಣಿಗೆ ಮೂಲಕ ಬಸ್ತವಾಡಿ ಮತ್ತು ಹಳ್ಳದಕೇರಿಯ ತುರಮಂದಿ ಸಂಚರಿಸಿ ಮಾ.17ಕ್ಕೆ ಮೆರವಣಿಗೆಯ ಮೂಲಕ ಗುಡಿಗೆ ದೇವಿ ಮರಳಿ ದೇವಾಲಯಕ್ಕೆ ಬರುವಳು. ನಂತರ ದೇವಿಯ ಸಿಮೋಲ್ಲಂಘನ ನಡೆಸಿ ಜಾತ್ರೆಗೆ ತೆರೆ ಎಳೆಯಲಾಗುವದು.
ಅರ್ಪಣೆ: ಭಕ್ತರು `ಪಂಚಲೋಹ ಪ್ರಭಾವಳಿ~ ಮತ್ತು `ಬೆಳ್ಳಿಯ ಛತ್ರ~ ದೇವಿಗೆ ಅರ್ಪಿಸಲಿದ್ದಾರೆ.
ಸ್ಪರ್ಧೆಗಳು: 13ರಂದು ನೇತಾಜಿ ಸುಭಾಸ್ಚಂದ್ರ ಭೋಸ್ ಯುವಕ ಮಂಡಳ ಆಶ್ರಯದಲ್ಲಿ `ಮುಕ್ತ ವಾಲಿಬಾಲ್ ಪಂದ್ಯಾವಳಿ~ ನಡೆಯಲಿದೆ.
15ರಂದು ಕುದುರೆಗಾಡಿ , ಒಂದು ಎತ್ತು-ಒಂದು ಕುದುರೆ ಗಾಡಿಯ ಸ್ಪರ್ಧೆ ನಡೆಯುವುದು
16ರಂದು ಜೋಡೆತ್ತಿನ ಗಾಡಿ ಮತ್ತು ಕುದುರೆ ಗಾಡಿ ಸ್ಪರ್ಧೆ ಜರುಗಲಿವೆ. 17ರಂದು ಜಂಗಿ ಕುಸ್ತಿ ನಡೆಯಲಿವೆ. ಅಡವಿ ಸಿದ್ದೇಶ್ವರ ನಾಟ್ಯ ಸಂಘದಿಂದ `ರಾಧಾ-ಕೃಷ್ಣ~ ಬಯಲಾಟ ಪ್ರದರ್ಶನ ಜೊತೆಗೆ ಪ್ರತಿ ರಾತ್ರಿ ನಾಟಕ ಮತ್ತು ಮನೋರಂಜನೆ ಕಾರ್ಯಕ್ರಮ ಜರುಗಲಿವೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.