ADVERTISEMENT

‘ಹೆಚ್ಚುವರಿ ಶಿಕ್ಷಕರ ನೇಮಕಾತಿ ಬೇಡ’

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎಂ.ವಸ್ತ್ರದಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:41 IST
Last Updated 29 ಮಾರ್ಚ್ 2018, 6:41 IST

ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಹೆಚ್ಚುವರಿ ಶಿಕ್ಷಕರ ನೇಮಕ ವಿರೋಧಿಸಿ ಶಾಲೆಯ ಆಡಳಿತ ಮಂಡಳಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎಂ.ವಸ್ತ್ರದ ಅವರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದ ಮಕ್ಕಳ ಪಾಲಕರು, ಆಡಳಿತ ಮಂಡಳಿ ಸದಸ್ಯರು,‘ ಶಾಲೆಯಲ್ಲಿ ಈಗಾಗಲೇ ಏಳು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.209 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಯಾವುದೇ ಹೆಚ್ಚುವರಿ ಶಿಕ್ಷಕರ ಅವಶ್ಯಕತೆ ಇಲ್ಲ ಎಂದು ಬಿಇಒಗೆ ಮನವರಿಕೆ ಮಾಡಿಕೊಟ್ಟರು.

‘ಕಳೆದ ವರ್ಷ 232 ಮಕ್ಕಳ ಸಂಖ್ಯೆ ಇದ್ದಾಗ ಒಬ್ಬ ಶಿಕ್ಷಕರನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿತ್ತು. ಎಸ್.ಡಿ.ಎಂ.ಸಿ ಸದಸ್ಯರ ಹೋರಾಟದ ಫಲವಾಗಿ ಹೆಚ್ಚುವರಿ ಶಿಕ್ಷಕರನ್ನು ಶಾಲೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು.ಈಗ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಹೆಚ್ಚುವರಿ ಶಿಕ್ಷಕರ ಅವಶ್ಯಕತೆ ಇಲ್ಲ. ಕೂಡಲೇ ಅವರನ್ನು ವಾಪಸ್‌ ಕರೆಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಎಸ್.ಡಿ.ಎಂ.ಸಿ ಅಧ್ಯಕ್ಷ ಈರಣ್ಣಾ ತುರಾಯಿ ಮಾತನಾಡಿ, ‘ಶಾಲೆಗೆ ಹೆಚ್ಚುವರಿ ಶಿಕ್ಷಕರ ಹಾಜರಿಗೆ ಬಿಡುವುದಿಲ್ಲ. ಈ ಕುರಿತು ಶಾಲೆಯಲ್ಲಿ ಠರಾವು ಮಾಡಲಾಗಿದೆ’ ಎಂದರು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಾಳಪ್ಪ ಚವರದ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶರಭಾ ಹಾದಿಮನಿ, ಸದಸ್ಯರಾದ ರಾಮನಗೌಡ ಪಾಟೀಲ, ಮಾರುತಿ ದಾವಣಗೇರಿ, ಬಸವರಾಜ ಕುರಿ, ಈರಪ್ಪ ಮುರಾರಿ, ನಾರಾಯಣ ಬಡಿಗೇರ, ಬಸಯ್ಯಾ ರೇವಯ್ಯನವರ, ಬಸವಂತಪ್ಪ ಭರಮಗೌಡರ, ದುಂಡಯ್ಯ ಪೂಜೇರ, ಜ್ಯೋತಿ ಕಕ್ಕಯ್ಯನವರ ಹಾಗೂ ಅನೇಕರು ಇದ್ದರು.

ಕ್ಷೇತ್ರಶಿಕ್ಷಣಾಧಿಕಾರಿ ಪಿ.ಎಂ.ವಸ್ತ್ರದ ಮಾತನಾಡಿ, ‘ಮೇಲಧಿಕಾರಿಗಳ ಆದೇಶ ಮೆರೆಗೆ ಹೆಚ್ಚುವರಿ ಶಿಕ್ಷಕರನ್ನು ಮಲ್ಲಮ್ಮನ ಬೆಳವಡಿ ಗ್ರಾಮದ ಸರ್ಕಾರಿ ಹೆಣ್ಣು ಶಾಲೆಗೆ ಕಳುಹಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.