ADVERTISEMENT

ಹೆದ್ದಾರಿಗೆ ತೊಗರಿ ಚೆಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 5:37 IST
Last Updated 10 ಮಾರ್ಚ್ 2018, 5:37 IST
ತೆಲಸಂಗ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿಯಲ್ಲಿ ತೊಗರಿ ಚೆಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು
ತೆಲಸಂಗ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿಯಲ್ಲಿ ತೊಗರಿ ಚೆಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು   

ತೆಲಸಂಗ: ತೊಗರಿ ಖರೀದಿಯಲ್ಲಿ ಅಥಣಿ ತಾಲ್ಲೂಕಿನ ಹೆಸರು ಕೈ ಬಿಟ್ಟಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರೈತರು ಶುಕ್ರವಾರ ಜೇವರ್ಗಿ–ಸಂಕೇಶ್ವರ ರಾಜ್ಯ
ಹೆದ್ದಾರಿ ಮೇಲೆ ತೊಗರಿ ಸುರಿದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.

ಬಿಜೆಪಿ  ನೇತೃತ್ವದಲ್ಲಿ ರೈತರು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸೇರಿ, ಬಸ್‌ ತಡೆದು ಆಕ್ರೋಶ ವ್ಯಕ್ತಪಡಿಸಿದರು. ತೆಲಸಂಗ ಕ್ರಾಸ್‌ದಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ, ರಾಜ್ಯ ಸರ್ಕಾರ ಅಥಣಿ ತಾಲ್ಲೂಕಿನ ರೈತರೊಂದಿಗೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು.

ಸುಡುವ ಬಿಸಿಲನ್ನೂ ಲೆಕ್ಕಿಸದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಪ್ರತಿಭಟನೆಯಿಂದ ನಾಲ್ಕು ತಾಸು ಹೆದ್ದಾರಿ ಸಂಚಾರ ಬಂದ್‌ ಆಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು.

‘ಬೆಳಗಾವಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ ಖಾತೆಗೆ 20 ಕ್ವಿಂಟಲ್ ತೊಗರಿಯನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿತ್ತು. ಆದರೆ ಜಿಲ್ಲೆಯ ತೊಗರಿ ಕಣಜ ಎಂದೇ ಹೆಸರಾದ ಅಥಣಿಯಲ್ಲಿ ಖರೀದಿ ಕೇಂದ್ರವನ್ನೇ ತೆರೆಯುತ್ತಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರೊಂದಿಗೆ ಮಾತನಾಡಿದ ಪ್ರಭಾರ ತಹಶೀಲ್ದಾರ್‌ ರಾಜು ಬುರ್ಲಿ ಅವರು ‘ಜಿಲ್ಲಾಧಿಕಾರಿಗಳು ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಸರ್ಕಾರದ ಆದೇಶ ಬಂದರೆ ನಾಳೆಯಿಂದ  ಖರೀದಿ ಕೇಂದ್ರ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಯಲಿದೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಚಿಕ್ಕೋಡಿ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗುರಪ್ಪ ದಾಶ್ಯಾಳ, ಎ.ಪಿ.ಎಂ.ಸಿ. ಅಧ್ಯಕ್ಷ ಯಂಕಣ್ಣ ಅಸ್ಕಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.