ಬೆಳಗಾವಿ: ಕಳೆದ ಐದಾರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದ ಅಂಧ ಪ್ರೇಮಿಗಳು ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂಧಃಕಾರದಲ್ಲಿರುವ ತಮ್ಮ ಬದುಕನ್ನು ಬೆಳಗಿಕೊಳ್ಳಲು ಒಬ್ಬರಿ ಗೊಬ್ಬರು ಆಸರೆಯಾದರು. ಈ ಮೂಲಕ ‘ಪ್ರೀತಿ ಕುರುಡಲ್ಲ, ಪ್ರೀತಿಗೆ ಜಾತಿ, ಮತ, ಅಂಧತ್ವ ಅಡ್ಡ ಬಾರದು’ ಎಂಬ ಸಂದೇಶ ಸಾರಿದರು.
ಸ್ಫೂರ್ತಿ ಅಂಧರ ಸಂಘ ಹಾಗೂ ಉಷಾತಾಯಿ ಪೋತದಾರ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಹನುಮಾನ ನಗರದ ಭಕ್ತಿವಾಸ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆದ ವಿವಾಹ ಸಮಾರಂಭವು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಅಂಧ ಪ್ರೇಮಿಗಳಾದ ನಾಗರಾಜ ಸ್ವಾಮಿ ಮತ್ತು ಬಿ.ಸಾಕಮ್ಮ ಹಸೆಮಣೆ ಏರುವ ಮೂಲಕ ಹೊಸ ಬದುಕಿಗೆ ನಾಂದಿ ಹಾಡಿದರು. ಸಮಾರಂಭದಲ್ಲಿ ನೆರದಿದ್ದವರು ವಧು–ವರರಿಗೆ ಶುಭ ಹಾರೈಸಿದರು.
ಮೂಲತಃ ಬಳ್ಳಾರಿಯವರಾದ ನಾಗರಾಜ ಸ್ವಾಮಿ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದು, ಬೆಂಗಳೂರು ಬಳಿಯ ನೆಲಮಂಗಲದ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಕಮ್ಮ ಮೂಲತಃ ಮೈಸೂರಿನವರು.
ಇವರಿಬ್ಬರೂ ಸ್ಫೂರ್ತಿ ಅಂಧರ ಸಂಘದ ಸದಸ್ಯರಾಗಿದ್ದು, ಐದಾರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸ್ನೇಹಿತರಾಗಿದ್ದರು. ಬಳಿಕ ಸ್ನೇಹವು ಪ್ರೇಮಕ್ಕೆ ತಿರುಗಿತ್ತು. ಈ ವಿಷಯವನ್ನು ಇಬ್ಬರೂ ಉಷಾತಾಯಿ ಪೋತದಾರ ಫೌಂಡೇಷನ್ ಅಧ್ಯಕ್ಷ ಅನಿಲ್ ಪೋತದಾರ ಗಮನಕ್ಕೆ ತಂದಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ ಅನಿಲ್, ತಾಳಿ, ಊಟ ಸೇರಿದಂತೆ ವಿವಾಹದ ಸಂಪೂರ್ಣ ವೆಚ್ಚ ಭರಿಸುವ ಮೂಲಕ ಇಬ್ಬರ ವಿವಾಹವನ್ನು ನೆರವೇರಿಸಿದರು. ಪಾಲಿಕೆ ಸದಸ್ಯೆ ಸರಳಾ ಹೇರೇಕರ ಅವರು ವಧು–ವರರಿಗೆ ಬಟ್ಟೆ ಹಾಗೂ ರಾಹುಲ್ ಹಜಾರೆ ಅವರು ಪಾತ್ರೆ ಗಳನ್ನು ಕೊಡಿಸುವ ಮೂಲಕ ನೆರವಾದರು.
ಮತ್ತೊಂದು ಅಂಧ ಜೋಡಿ: ಈ ವಿವಾಹ ಸಮಾರಂಭದಲ್ಲೇ ಪ್ರದೀಪ ಕುಮಾರ್ ಹಾಗೂ ವಿದ್ಯಾವತಿ ಬಾಲೇ ಬಾಯಿ ಸಹ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಪ್ರದೀಪಕುಮಾರ್ ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದು, ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಬೀದರ್ ಜಿಲ್ಲೆಯ ಪಿ.ಕಾಶೆಂಪುರ ಗ್ರಾಮದ ವಿದ್ಯಾವತಿ ಬಾಲೇಬಾಯಿ ಡಿ.ಇಡಿ. ಶಿಕ್ಷಣ ಪಡೆದಿದ್ದು, ಗುಲ್ಬರ್ಗದ ಅಂಧ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೃಷ್ಟಾನ್ನ ಭೋಜನ: ಮದುವೆ ಅಂಗವಾಗಿ ಪೂರಿ–ಕುರ್ಮಾ, ಜಿಲೇಬಿ, ಶಾವಿಗೆ ಪಾಯಸ, ಮಸಾಲೆ ಅನ್ನ, ಅನ್ನ–ಸಾರು... ಹೀಗೆ ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
‘ಸ್ಫೂರ್ತಿ ಅಂಧರ ಸಂಘ ಹಾಗೂ ಉಷಾತಾಯಿ ಪೋತದಾರ ಫೌಂಡೇಷನ್ನವರು ನಮ್ಮ ವಿವಾಹ ನೆರವೇರಿಸಿದ್ದಾರೆ. ಅವರಿಗೆ ನಾವು ಚಿರಋಣಿ ಯಾಗಿರುತ್ತೇವೆ. ದೃಷ್ಟಿಹೀನರ ಬಾಳನ್ನು ಪ್ರಕಾಶಿಸಲು ಅವಿರತವಾಗಿ ಶ್ರಮಿಸುತ್ತಿರುವ ಇವರ ಕಾರ್ಯ ಶ್ಲಾಘನೀಯ’ ಎಂದು ನಾಗರಾಜ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಂಧರನ್ನು ಪ್ರೀತಿಸುವವರಿಗಿಂತ ನಿರ್ಲಕ್ಷಿಸುವವರೇ ಹೆಚ್ಚು. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ನಮ್ಮ ಮದುವೆ ಮಾಡುತ್ತಿರುವುದಕ್ಕೆ ಬಹಳ ಖುಷಿಯಾಗಿದೆ. ಬೆಳಗಾವಿ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಲ್ಲೂ ಅಂಧರ ವಿವಾಹ ಮಾಡಲು ಗಣ್ಯರು ಮುಂದೆ ಬರಬೇಕು. ಈ ಮೂಲಕ ಅಂಧರಿಗೂ ಆತ್ಮವಿಶ್ವಾಸದಿಂದ ಬಾಳಲು ನೆರವಾಗಬೇಕು’ ಎನ್ನುತ್ತಾರೆ ಪ್ರದೀಪಕುಮಾರ್ ಜೊತೆಗೆ ಹಸೆಮಣೆ ಏರಿದ ವಿದ್ಯಾವತಿ ಬಾಲೇಬಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.