
ಬೆಳಗಾವಿ: ಯುವ ಚಯನ್ನು ರಚಿಸಿಕೊಂಡು ರೈತರ ಅಭಿವೃದ್ಧಿಯಾಗಿ ಹಾಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ಭಾರತೀಯ ಕೃಷಿ ಸಮಾಜವು ನಿರ್ಧರಿಸಿದೆ.
ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಮಟ್ಟದ ಸಭೆಯಲ್ಲಿ, ಮೇ ತಿಂಗಳಿನಲ್ಲಿ ಕನಿಷ್ಠ 10 ಸಾವಿರ ರೈತರನ್ನೊಳಗೊಂಡ ಜಿಲ್ಲಾ ಸಮಾವೇಶವನ್ನು ಮಾಡುವ ಮೂಲಕ ರೈತಪರ ಹೋರಾಟದ ಬಗ್ಗೆ ರೂಪುರೇಷೆ ನಿರ್ಮಿಸಲು ತೀರ್ಮಾನಿಸಲಾಯಿತು.
ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನದಂತಹ ಯೋಜನೆಗಳ ಫಲಾನುಭವಿಗಳಾಗಿರುವ ರೈತರಿಗೆ ಪುನಃ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ ರೂಪಿಸಲು ನಿರ್ಧರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ `ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಕೃಷಿಕ ಸಮಾಜದ ಗ್ರಾಮ ಘಟಕವನ್ನು ರಚಿಸಬೇಕು. ಯುವ ರೈತ ಪಡೆಯನ್ನು ನಿರ್ಮಿಸಿ ಕೃಷಿಕ ಸಮಾಜವು ರೈತರ ಹೋರಾಟವನ್ನು ಬಲಗೊಳಿಸಬೇಕು~ ಎಂದು ಸಲಹೆ ನೀಡಿದರು.
`ಜಿಲ್ಲೆಯಲ್ಲಿ ಬರಗಾಲದಿಂದಾಗಿ ದನಕರುಗಳಿಗೆ ಮೇವು, ನೀರಿನ ಕೊರತೆ ಉದ್ಭವಿಸುತ್ತಿದೆ. ವಿದ್ಯುತ್ ಕೊರತೆಯಿಂದಾಗಿ ರೈತರು ತೊಂದರೆಗೀಡಾಗುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲೆಯ ರೈತ ಮುಖಂಡರನ್ನು ಆಹ್ವಾನಿಸಿ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು~ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಗೌಡ ಕಲಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಳಜ್ಜ ಗೊದಳ್ಳಿ, ಮಂಜುನಾಥ ವಸ್ತ್ರದ, ಶ್ರೀಕಾಂತ ಪಾಟೀಲ, ಸಿ.ಎಸ್. ಉಣಕಲ್, ವಿಜಯಲಕ್ಷ್ಮಿ ಶೆಟ್ಟೆಣ್ಣವರ, ಡಾ. ಎಸ್.ಐ. ರಾಜಿ ಹಾಜರಿದ್ದರು. ಸಿದ್ಧಾರ್ಥ ಸಂತಾಗೋಳ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.