ADVERTISEMENT

‘ಕುಹಕ ನುಡಿಗೆ ಕಿವಿಗೊಡಬೇಡಿ’

ಸನ್ನಡತೆ ಹೊಂದಿದ 35 ಕೈದಿಗಳ ಬಿಡುಗಡೆ; ಕುಟುಂಬದವರ ಹರ್ಷ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 6:59 IST
Last Updated 16 ಆಗಸ್ಟ್ 2016, 6:59 IST
ಸನ್ನಡತೆ ಹೊಂದಿದ 35 ಕೈದಿಗಳನ್ನು ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಬಿಡುಗಡೆಗೊಳಿಸಲಾಯಿತು
ಸನ್ನಡತೆ ಹೊಂದಿದ 35 ಕೈದಿಗಳನ್ನು ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಬಿಡುಗಡೆಗೊಳಿಸಲಾಯಿತು   

ಬೆಳಗಾವಿ: ‘ಜೈಲಿಗೆ ಹೋಗಿ ಬಂದವರು ಎಂಬ ಕೆಲವರ ಕುಹಕ ನುಡಿಗಳಿಗೆ ಕಿವಿಗೊಡಬೇಡಿ. ಸಮಾಜದ ಜತೆಗೆ ಹೊಂದಿಕೊಂಡು ಹೋಗಿ ಜೀವನ ರೂಪಿಸಿಕೊಳ್ಳಿ’ ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಅಶೋಕ ನಿಜಗಣ್ಣವರ ಹೇಳಿದರು.

ಇಲ್ಲಿಗೆ ಸಮೀಪದ ಹಿಂಡಲಗಾ ಕಾರಾಗೃಹದಲ್ಲಿ ಸನ್ನಡತೆ ತೋರಿದ 35 ಕೈದಿಗಳನ್ನು ಸ್ವಾತಂತ್ರ್ಯೋತ್ಸವದ ಅಂಗ­ವಾಗಿ ಬಿಡುಗಡೆಗೊಳಿಸಿದ ಸಮಾರಂಭ­ದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜೀವನದಲ್ಲಿ ಯಾರದ್ದೂ ಕಸಿಯಬಾರದು ಹಾಗೂ ಯಾರಿಗೂ ತೊಂದರೆ ಕೊಡಬಾರದು ಎಂಬ ನೀತಿ ಅನುಸರಿಸಿದರೆ ಒಳ್ಳೆಯ ಬದುಕು ಸಾಗಿಸಬಹುದು ಎಂದು ಅವರು ಹೇಳಿದರು.

ಯಾವುದೋ ಕ್ಷಣದಲ್ಲಿ ಮಾಡಿದ ತಪ್ಪಿಗೆ ಬದುಕಿನ ಮಹತ್ವದ ಅವಧಿ­ಯನ್ನು ಕಾರಾಗೃಹದಲ್ಲಿ ಕಳೆಯಬೇಕಾ­ಯಿತು. ಇಲ್ಲಿ ಪಡೆದ ಸುಧಾರಣಾ ಕ್ರಮಗಳನ್ನು ಪಾಲಿಸಿ ಸಮಾಜಮುಖಿ­ಯಾಗಿ ಬದುಕಬೇಕು ಎಂದರು.

ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಮಾತನಾಡಿ, ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ, ಕಲಿತು ಹೊಂದಿ­ಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಆರ್‌. ರವಿಕಾಂತೇಗೌಡ ಮಾತನಾಡಿ, ಜೈಲುಗಳು ಆತ್ಮಶೋಧನೆ ಕೇಂದ್ರ­ಗಳಾ­ಗಿವೆ. ಈಗ ಬಿಡುಗಡೆ­ಯಾದವರು ಉತ್ತಮ ಬದುಕು ನಡೆಸಬೇಕು ಎಂದರು.

ಕಾರಾಗೃಹ ಸಲಹಾ ಸಮಿತಿ ಸದಸ್ಯ ವಿಜಯ ಮೋರೆ, ಇದೇ ಸನ್ನಡತೆಯನ್ನು ಜೀವನುದ್ದಕ್ಕೂ ಕಾಪಾಡಿಕೊಂಡು ಎಲ್ಲರ ಗೌರವಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.

ಪೊಲೀಸ್‌ ಆಯುಕ್ತ ಟಿ.ಜಿ. ಕೃಷ್ಣಭಟ್‌, ಮಾಜಿ ಮೇಯರ್‌ ಸಿದ್ದನಗೌಡ ಪಾಟೀಲ, ಕವಿತಾ ಕಾಂಬಳೆ ಇತರರು ಉಪಸ್ಥಿತರಿದ್ದರು.

ಕಾರಾಗೃಹದ ಅಧೀಕ್ಷಕ ಟಿ.ಪಿ. ಶೇಷ ಮಾತನಾಡಿ, ಸನ್ನಡತೆಯ ಹೊಂದಿದ 43 ಕೈದಿಗಳ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ 35 ಜನರಿಗೆ ಸರ್ಕಾರ ಬಿಡುಗಡೆಗೊಳಿಸಿದೆ, ಎಲ್ಲರೂ ಸನ್ನಡತೆಯಿಂದ ಬದುಕಿ, ಬಾಳಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.