ಗೋಕಾಕ: ‘ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದಿಂದ ಅರಭಾವಿಯ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ವಸತಿ ನಿರ್ಮಾಣಕ್ಕಾಗಿ ₹ 90 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.
‘ಅರಭಾವಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗಮದಿಂದ 18 ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿವೆ. ತಲಾ ₹ 5 ಲಕ್ಷ ಬಿಡುಗಡೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಅವರಿಗೆ ಮನೆಗಳನ್ನು ಮಂಜೂರು ಮಾಡಿಸಲಾಗಿದೆ’ ಎಂದು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವೇಚನಾ ಕೋಟಾದಡಿ ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಜಾತಿಯ 20 ಫಲಾನುಭವಿಗಳಿಗೆ ಸಾಲ ಸೌಲಭ್ಯಗಳ ಆದೇಶ ಪತ್ರಗಳನ್ನೂ ವಿತರಿಸಿದರು. ₹ 60 ಲಕ್ಷ ಸಾಲ ಸೌಲಭ್ಯಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ₹ 30 ಲಕ್ಷ ಸಬ್ಸಿಡಿ ದೊರೆಯಲಿದೆ. ತಲಾ ₹ 3 ಲಕ್ಷ ಸಾಲದಲ್ಲಿ ₹ 1.50 ಲಕ್ಷ ಸಬ್ಸಿಡಿ ಸಿಗಲಿದೆ’ ಎಂದರು.
ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಬಿ. ಮಾರ್ಟಿನ್, ಜಿಲ್ಲಾ ಸಂಯೋಜಕ ಡಾ.ನಾಗರಾಜ, ಮುಖಂಡರಾದ ರಮೇಶ ಮಾದರ, ಲಕ್ಷ್ಮಣ ತೆಳಗಡೆ, ಸತ್ತೆಪ್ಪ ಕರವಾಡೆ, ಶಾಂತಪ್ಪ ಹಿರೇಮೇತ್ರಿ, ಸಂಜು ಮಾದರ, ಯಮನಪ್ಪ ಕರಬನ್ನವರ, ಮನೋಹರ ಅಜ್ಜನಕಟ್ಟಿ, ವಿರೂಪಾಕ್ಷ ಬೈಲನ್ನವರ, ಚಂದ್ರಕಾಂತ ದೊಡಮನಿ, ಬಸು ಕಾಡಾಪೂರ, ಬಸವರಾಜ ದೊಡಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.