ಬೆಳಗಾವಿ: ನಗರದಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ 11 ವರ್ಷದ ಬಾಲಕ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.
ಇಲ್ಲಿನ ಅನಗೋಳ ಪ್ರದೇಶದ ರಾಜಹಂಸ ಗಲ್ಲಿಯ ನಿವಾಸಿ ಸದ್ಹಿದ್ ಮುಜಾಮಿಲ್ ಮುಲ್ಲಾ ಮೃತಪಟ್ಟ ಬಾಲಕ. ಬಾಲಕನನ್ನು ರಕ್ಷಣೆ ಮಾಡಲು ಬಾವಿಗೆ ಜಿಗಿದ ವ್ಯಕ್ತಿ ಕೂಡ ನೀರಿನಲ್ಲಿ ಮುಳುಗಿ ನಿತ್ರಾಣಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸದ್ಹಿದ್ ಹಾಗೂ ಇತರ ನಾಲ್ವರು ಗೆಳೆಯರು ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜೊತೆಯಾಗಿ ಬಂದಿದ್ದರು. ಮೆರವಣಿಗೆ ಮುಂದೆ ಸಾಗಿದಾಗ ಸದ್ಹಿದ್ ಮಾತ್ರ ಹಿಂದೆ ಉಳಿದ. ಹಿಂದಿನಿಂದ ಓಡುವ ವೇಳೆ ಆಯತಪ್ಪಿ ಬಾವಿಗೆ ಬಿದ್ದ. ಇದನ್ನು ಗಮನಿಸಿದ ವ್ಯಕ್ತಿ ಬಾಲಕನ ರಕ್ಷಣೆಗಾಗಿ ಬಾವಿಗೆ ಜಿಗಿದರು.
ಆದರೆ, ಅವರಿಗೂ ಬಹಳ ಹೊತ್ತು ಈಜಲು ಸಾಧ್ಯವಾಗದ ಕಾರಣ ಚೀರಾಟ ಶುರು ಮಾಡಿದರು. ಇದನ್ನು ಕೇಳಿದ ಜನ ಬಾವಿಯಲ್ಲಿ ಇಣುಕಿದಾಗ ವಿಷಯ ಗೊತ್ತಾಯಿತು. ಹಗ್ಗದ ನೆರವಿನಿಂದ ಇಬ್ಬರನ್ನೂ ಮೇಲಕ್ಕೆ ತಂದು, ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರೊಳಗೆ ಬಾಲಕ ಕೊನೆಯುಸಿರೆಳೆದಿದ್ದ’ ಎಂದು ಟಿಳಕವಾಡಿ ಠಾಣೆಯ ಸಿಪಿಐ ದಯಾನಂದ ಶೇಗುಣಸಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.