ಬೆಳಗಾವಿ: ‘ನಗರದ ಸಿಇಎನ್ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆಯಲ್ಲಿ ಕಳೆದೊಂದು ವರ್ಷದಲ್ಲಿ 1,309 ಸೈಬರ್ ಹಣಕಾಸು ವಂಚನೆ ಪ್ರಕರಣಗಳಲ್ಲಿ (ಅರ್ಜಿಗಳು ಸೇರಿದಂತೆ) ಹಣ ಕಳೆದುಕೊಂಡಿದ್ದ ದೂರುದಾರರ ಖಾತೆಗೆ ಮರಳಿ ಸಂದಾಯ ಮಾಡಿಸಲು ಚಾಲನೆ ನೀಡಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ದೂರುದಾರರು ಕಳೆದುಕೊಂಡ ₹ 2.45 ಕೋಟಿ ಹಣದ ಬಗ್ಗೆ ತನಿಖೆ ಕೈಗೊಂಡು ಸೈಬರ್ ವಂಚಕರ 1,825 ಬ್ಯಾಂಕ್ ಖಾತೆ ಮತ್ತು ವ್ಯಾಲೆಟ್ಗಳಲ್ಲಿದ್ದ ₹ 2,33,09,350 ಹಣವನ್ನು ಫ್ರೀಜ್ (ಸ್ಥಗಿತ) ಮಾಡಿಸಲಾಗಿದೆ. ಸಂಬಂಧಿಸಿದ ದೂರುದಾರರ ಖಾತೆಗೆ ₹ 88,10,347 ಸಂದಾಯ ಮಾಡಿಸಲಾಗಿದೆ. ಇನ್ನುಳಿದ ₹ 1,44,99,003 ಮೊತ್ತವನ್ನು ಸಹ ದೂರುದಾರರಿಗೆ ಸಂದಾಯ ಮಾಡಲು ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಯಾರಾದರೂ ಸೈಬರ್ ವಂಚನೆಗೆ ಒಳಗಾದರೆ ತಮ್ಮ ಬ್ಯಾಂಕ್ ಖಾತೆ ಹಾಗೂ ವೈಯಕ್ತಿಕ ವಿವರಗಳೊಂದಿಗೆ ತಕ್ಷಣ (ಸುವರ್ಣ ಸಮಯ) ಸಿಇಎನ್ ಅಪರಾಧ ಠಾಣೆ (ದೂ. ಸಂಖ್ಯೆ: 0831-2950320) ಸಂಪರ್ಕಿಸಬೇಕು. ಇಲ್ಲದಿದ್ದರೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು. ಸಂಬಂಧಿಸಿದ ಬ್ಯಾಂಕ್ ಶಾಖೆಗೂ ಮಾಹಿತಿ ಕೊಡಬೇಕು. ಸೈಬರ್ ಹಣಕಾಸು ವಂಚನೆ ತಡೆಯುವ ನಿಟ್ಟಿನಲ್ಲಿ ಬ್ಯಾಂಕ್ಗಳ ಅಧಿಕಾರಿಗಳ ಸಭೆ ನಡೆಸಿ ಅವರ ಸಹಕಾರವನ್ನೂ ಕೋರಲಾಗಿದೆ. ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಹಲವು ರೀತಿಯಲ್ಲಿ ವಂಚಿಸುವ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಆದ್ದರಿಂದ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.