ADVERTISEMENT

ರಮೇಶ ಸೂಚನೆ ಮೇರೆಗೆ 2 ಗ್ರಾ.ಪಂ ಅಧ್ಯಕ್ಷರ ರಾಜೀನಾಮೆ ?

​ಪ್ರಜಾವಾಣಿ ವಾರ್ತೆ
Published 6 ಮೇ 2019, 15:32 IST
Last Updated 6 ಮೇ 2019, 15:32 IST

ಗೋಕಾಕ: ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹ್ಮದ್‌ರಫೀಕ್‌ ಆದಿಲಶಾ ಮಕಾನದಾರ ಹಾಗೂ ಲೊಳಸೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನವ್ವ ಕಿಲಾರಿ ಅವರು ಸೋಮವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನ ಬಂಡಾಯ ಶಾಸಕ ರಮೇಶ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಜೊತೆ ಮುನಿಸಿಕೊಂಡಿರುವ ರಮೇಶ ಅವರು, ಇತ್ತೀಚೆಗೆ ಗೋಕಾಕದ ತಮ್ಮ ನಿವಾಸದಲ್ಲಿ ನಗರಸಭೆ ಸದಸ್ಯರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಸಭೆಯನ್ನು ನಡೆಸಿದ್ದರು. ಪಕ್ಷದಲ್ಲಿ ತಮಗಾದ ನೋವು ಹಂಚಿಕೊಂಡಿದ್ದರು. ಅವರ ನಿರ್ದೇಶನದ ಮೇರೆಗೆ ಹಂತಹಂತವಾಗಿ ರಾಜೀನಾಮೆ ನೀಡಲು ಸದಸ್ಯರು ನಿರ್ಧರಿಸಿದ್ದರು.

ಅದರ ಮುಂದುವರಿದ ಭಾಗವಾಗಿ ಇವರಿಬ್ಬರೂ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

ವೈಯಕ್ತಿಕ ಕಾರಣ:

ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ಇಬ್ಬರೂ ಪ್ರಸ್ತಾಪಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಮಕಾನದಾರ, ‘ನನ್ನ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಹೊರತು, ರಾಜಕೀಯ ಕಾರಣಗಳಿಗಾಗಿ ಅಲ್ಲ’ ಎಂದು ತಿಳಿಸಿದರು.

‘2010ರಲ್ಲಿ ನಾನು ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಆಯ್ಕಗೊಂಡಿದ್ದೆ. ಪ್ರಸಕ್ತ ಅವಧಿ ನನಗೆ ಎರಡನೇ ಅವಧಿಯಾಗಿದೆ. ಕಳೆದ ಆಗಸ್ಟ್‌ 24ರಂದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.