ಚಿಕ್ಕೋಡಿ: ‘ಸುಳ್ಳು ದಾಖಲಾತಿ ಸೃಷ್ಟಿಸಿ, ವಿಮಾ ಕಂಪನಿಯಿಂದ ಹಣ ಕೊಡಿಸುತ್ತೇವೆಂದು ತಿಳಿಸಿ ಬೇರೆಯವರಿಗೆ ವಾಹನಗಳನ್ನು ಮಾರುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ ಇಬ್ಬರನ್ನು ಚಿಕ್ಕೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
‘ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಚ್ಚೇಂದ್ರಗಡ ಗ್ರಾಮದ ಯುನೂಸ್ ಸೈಯದ್ ಮತ್ತು ದಾಂಡೇಲಿಯ ಎ. ದಿಲಾವರ್ ಬಂಧಿತ ಆರೋಪಿಗಳು’ ಎಂದು ಇಲ್ಲಿನ ಡಿಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಅವರಿಂದ ₹ 2.60 ಕೋಟಿ ಮೌಲ್ಯದ 12 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.
‘ಡಿವೈಎಎಸ್ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್ಐ ರಾಕೇಶ ಬಗಲಿ, ಅಶೋಕ ಕುಳ್ಳೂರ ನೇತೃತ್ವದಲ್ಲಿ ಎಎಸ್ಐ ಎಲ್.ಎಸ್. ಖೋತ, ಎಸ್.ಎಸ್. ಅರಭಾಂವಿ, ಎಸ್.ಎಚ್. ದೇವರ, ಜಿ.ಎಸ್. ಕಾಂಬಳೆ, ಎನ್.ಎಸ್. ಬಡಿಗೇರ, ಎಸ್.ಎಂ. ಚೌಗಲಾ, ಆರ್.ಎಸ್. ಮೂಡಲಗಿ, ಎಸ್.ಬಿ. ಚೌಗಲಾ, ಎಂ.ಪಿ. ಸತ್ತಿಗೇರಿ, ಎಸ್.ಪಿ. ಗಲಗಲಿ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಮಾಹಿತಿ ನೀಡಿದರು.
ಕ್ವಾರಿಯಲ್ಲಿ ಮುಳುಗಿ ಸಾವು
ಬೆಳಗಾವಿ: ಕ್ವಾರಿಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮುಳುಗಿ ಯುವಕ ಸಾವಿಗೀಡಾದ ಘಟನೆ ತಾಲ್ಲೂಕಿನ ಕೋನೆವಾಡಿ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಪ್ರವೀಣ ನಾಗೇಂದ್ರ ಕಂಗ್ರಾಳ್ಕರ (19) ಎಂದು ಗುರುತಿಸಲಾಗಿದೆ. ಕ್ವಾರಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿ. ಅವರು ಈಜಲು ಬಂದಿದ್ದರು ಎಂದು ತಿಳಿದುಬಂದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.