ADVERTISEMENT

‘ರಾಯಣ್ಣನ ಚರಿತ್ರೆಯ ಸಂಶೋಧನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 9:32 IST
Last Updated 14 ಜನವರಿ 2018, 9:32 IST
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಉತ್ಸವ ಅಂಗವಾಗಿ ಶನಿವಾರ ನಡೆದ ಯುವಜನೋತ್ಸವ ಸಮಾರಂಭವನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಡಾ.ಎಸ್.ಎಂ. ಗಂಗಾಧರಯ್ಯ, ಸಂಶೋಧಕ ಡಾ.ಸಂತೋಷ ಹಾನಗಲ್ಲ ಇದ್ದರು
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಉತ್ಸವ ಅಂಗವಾಗಿ ಶನಿವಾರ ನಡೆದ ಯುವಜನೋತ್ಸವ ಸಮಾರಂಭವನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಡಾ.ಎಸ್.ಎಂ. ಗಂಗಾಧರಯ್ಯ, ಸಂಶೋಧಕ ಡಾ.ಸಂತೋಷ ಹಾನಗಲ್ಲ ಇದ್ದರು   

ಬೈಲಹೊಂಗಲ:  ‘ಮಲಪ್ರಭಾ ನದಿಯಲ್ಲಿ ಮುಳುಗಡೆಯಾದ ಹಳೆಯ ಸಂಗೊಳ್ಳಿ ಗ್ರಾಮದಉತ್ಕನನ ಅತ್ಯಅವಶ್ಯವಾಗಿದೆ' ಎಂದು ಇತಿಹಾಸ ಸಂಶೋಧಕ ಡಾ.ಸಂತೋಷ ಹಾನಗಲ್ಲ ಹೇಳಿದರು.

ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತದಿಂದ ರಾಯಣ್ಣ ಉತ್ಸವ ಅಂಗವಾಗಿ ಶನಿವಾರ ನಡೆದ ಯುವಜನೋತ್ಸವ ಸಮಾರಂಭದಲ್ಲಿ ಅವರು ಆಶಯ ನುಡಿ ಮಂಡಿಸಿ ಮಾತನಾಡಿದರು.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಅಧ್ಯಕ್ಷ ಡಾ.ಎಸ್.ಎಂ. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿ 'ರಾಯಣ್ಣನನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕು. ರಾಯಣ್ಣನ ಅಧ್ಯಯನ ಪೀಠ, ಪ್ರಾಧಿಕಾರದ ಮೂಲಕ ಸಂಗೊಳ್ಳಿ, ನಂದಗಡ ಅಭಿವೃದ್ಧಿಯಾಗಬೇಕು. ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ರಾಷ್ಟ್ರೀಯ ಸ್ಮಾರಕವಾಗಬೇಕು ಎಂದರು.

ADVERTISEMENT

ಸಂಗೊಳ್ಳಿಯ ಮಲಪ್ರಭಾ ದಂಡೆ ಮೇಲಿರುವ ಕಿತ್ತೂರು ಮಲ್ಲಸರ್ಜನನ ಎರಡನೇ ಹೆಂಡತಿ ರುದ್ರಮ್ಮ ಸಮಾಧಿ ಸ್ಥಳವನ್ನು ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಬೇಕು. ಎಲ್ಲ ಕ್ಯಾಲೆಂಡರ್‌ಗಳಲ್ಲಿ ಜ.12, 13ರಂದು ರಾಯಣ್ಣನ ಉತ್ಸವ ಇದೆ ಎಂಬುವದರ ಕುರಿತು ಪ್ರಕಟ ಮಾಡಬೇಕು. ರಾಯಣ್ಣನ ಹುತಾತ್ಮ ದಿನ ಆಚರಣೆ ಮಾಡಿ ಗೌರವ ಸಲ್ಲಿಸಬೇಕು. ನಂದಗಡ ಸಮಾಧಿ ಸ್ಥಳದಲ್ಲಿರುವ ಆಲದ ಮರ ರಾಷ್ಟ್ರೀಯ ಮರವಾಗಿಸಬೇಕು' ಎಂದು ಅಭಿಪ್ರಾಯಪಟ್ಟರು.

ಶಾಸಕ ಡಾ.ವಿಶ್ವನಾಥ ಪಾಟೀಲ ಸಮಾರಂಭ ಉದ್ಘಾಟಿಸಿದರು. ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸರ್ಕಾರಿ ಪ್ರಥಮ ದರ್ಜೆ ಮಹಾ
ವಿದ್ಯಾಲಯ ಉಪನ್ಯಾಸಕ ಡಾ.ಹನುಮಂತ ಸಂಜೀವಣ್ಣವರ, ಸಂಶೋಧಕ ಬಸವರಾಜ ಕಮತ ಮಾತನಾಡಿದರು. ಪ್ರವೀಣ ಗಿರಿ, ಕಾನೂನು ವಿದ್ಯಾರ್ಥಿ ಉಮೇಶ ಲಾಲ್‌ ರಾಯಣ್ಣನ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವಾ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ ಇದ್ದರು. 

ಶಿವ ತಾಂಡವ ನೃತ್ಯ, ಹಾಸ್ಯ ಚಟಾಕಿಗೆ ಮನಸೋತ ಪ್ರೇಕ್ಷಕರು: ರಾಯಣ್ಣನ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ನಡೆದ ನೃತ್ಯ, ಗಾಯನ, ಸಂಗೀತ, ನಾಟಕ, ನಗೆ ಹಬ್ಬ ಜನಮನ ಸೆಳೆದವು.

ಧಾರವಾಡದ ಮುಕುಂದ ಕುಲಕರ್ಣಿ ಭಜನಾ ಮೇಳದಿಂದ ಇಂಪಾದ ಭಜನೆ, ಹಣ್ಣಿಕೇರಿ ಸಿದ್ದಪ್ಪ ನಿಂಗಪ್ಪ ಕೋಲಕಾರ ಚೌಡಕಿ ಪದಗಳು, ಸಂಗೊಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ‘ಹುಲಿಯು ಹುಟ್ಟಿತ್ತು ಕಿತ್ತೂರು ನಾಡಾಗ’ ಗೀತ ರೂಪಕ, ಶೇಖರ ಕುರಣಿಯ ಸುಗ್ಗಿ ಕುಣಿತ, ಪಾಶ್ಚಾಪುರದ ಶಾಂತಲಾ ಉಧೋಶಿ ಭರತ ನಾಟ್ಯ ಪ್ರದರ್ಶನ ನೀಡಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.