ADVERTISEMENT

ತುಮಕೂರಿನ ಲಕ್ಷ್ಮೀನಾರಾಯಣಗೂ ಟಿಕೆಟ್‌ ಆಸೆ

ಶ್ರೀಕಾಂತ ಕಲ್ಲಮ್ಮನವರ
Published 31 ಜನವರಿ 2018, 9:16 IST
Last Updated 31 ಜನವರಿ 2018, 9:16 IST
ಲಕ್ಷ್ಮೀನಾರಾಯಣ
ಲಕ್ಷ್ಮೀನಾರಾಯಣ   

ಬೆಳಗಾವಿ: ಬಿಜೆಪಿ ಹಾಗೂ ಕೆಜೆಪಿ ತಿಕ್ಕಾಟದಿಂದಾಗಿ ಕಳೆದ ಚುನಾವಣೆ ಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಎಂಇಎಸ್‌ ಬೆಂಬಲಿತ ಸಂಭಾಜಿ ಪಾಟೀಲ ಆಯ್ಕೆಯಾಗಿದ್ದರು. ಈಗ ಕೆಜೆಪಿ ವಿಲೀನವಾಗಿರುವುದರಿಂದ ಬಿಜೆಪಿಗೆ ಗೆಲುವಿನ ವಿಶ್ವಾಸ ಇಮ್ಮಡಿಗೊಳಿಸಿದೆ. ಈ ವಿಶ್ವಾಸದಿಂದಾಗಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಅಭಯ ಪಾಟೀಲ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈಗ ಪುನಃ ಕಣಕ್ಕಿಳಿಯಲು ಬಯಸಿದ್ದಾರೆ. ಜೈನ ಸಮುದಾಯಕ್ಕೆ ಸೇರಿರುವ ಅವರು 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಯಾದ ನಂತರ ಈ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಇದಕ್ಕೂ ಮುಂಚೆ 2004ರಲ್ಲಿ ಬಾಗೇವಾಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. 1999ರಲ್ಲಿ ಇದೇ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿದಾಗ, ಸೋಲುಂಡಿದ್ದರು. ಅಂದರೆ, ಕಳೆದ 20 ವರ್ಷಗಳಿಂದ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

ಇದು ಪಕ್ಷದ ಇತರ ಅಭ್ಯರ್ಥಿಗಳಲ್ಲಿ ಅಸಮಾಧಾನ ಮೂಡಿಸಿದೆ. ‘ಇಷ್ಟು ದೀರ್ಘ ಅವಧಿಯವರೆಗೆ ಒಬ್ಬರಿಗೆ ಅವಕಾಶ ನೀಡುವುದು ಎಷ್ಟು ಸರಿ, ಹಲವು ವರ್ಷಗಳ ಕಾಲ ನಾವೂ ದುಡಿದಿದ್ದೇವೆ. ನಮಗೂ ಅವಕಾಶ ನೀಡಿ’ ಎಂದು ಪಕ್ಷದ ವರಿಷ್ಠರ ಬಳಿ ಬೇಡಿಕೆ ಸಲ್ಲಿಸಿದ್ದಾರೆ.

ADVERTISEMENT

ಕಳೆದ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದಾಗ ಅವರೊಂದಿಗೆ ಗುರುತಿಸಿ ಕೊಂಡಿದ್ದ ಡಾ.ಎಸ್‌.ಎಂ. ದೊಡಮನಿ ಆ ಪಕ್ಷದಿಂದ ಕಣಕ್ಕಿಳಿದಿದ್ದರು. ಈಗ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಬಂದಿರುವುದು ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವು ದರಿಂದ ತಮಗೆ ಟಿಕೆಟ್‌ ಸಿಗಬಹುದು ಎನ್ನುವ ನಿರೀಕ್ಷೆ ಅವರದ್ದು.

ಈ ಕ್ಷೇತ್ರದಲ್ಲಿ ನೇಕಾರ ಮತ ದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಮೇಲೆ ಗಮನ ಕೇಂದ್ರೀಕರಿಸಿರುವ ಹಾಗೂ ಅದೇ ಸಮುದಾಯಕ್ಕೆ ಸೇರಿರುವ ಪಾಂಡುರಂಗ ಧೋತ್ರೆ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾಗಿರುವ ದೀಪಕ್‌ ಜಮಖಂಡಿ, ಪಕ್ಷದ ಕಾರ್ಯಕರ್ತ ಸುನೀಲ ಚೌಗುಲಾ ಕೂಡ ರೇಸ್‌ನಲ್ಲಿದ್ದಾರೆ.

ಕಾಂಗ್ರೆಸ್‌ನಲ್ಲಿ ತಳಮಳ: ಈ ಕ್ಷೇತ್ರದಲ್ಲಿ ಸುಮಾರು 45,000ಕ್ಕೂ ಹೆಚ್ಚು ನೇಕಾರ ಮತದಾರರಿದ್ದಾರೆ. ಇದೇ ಸಮುದಾಯಕ್ಕೆ ಸೇರಿರುವ  ವಿಧಾನ ಪರಿಷತ್‌ ಸದಸ್ಯ, ತುಮಕೂರು ಜಿಲ್ಲೆಯ ಎಂ.ಡಿ. ಲಕ್ಷ್ಮೀನಾರಾಯಣ ಈ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ತಮಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ವರಿಷ್ಠರ ಬಳಿ ಬೇಡಿಕೆಯೂ ಮಂಡಿಸಿದ್ದಾರೆ.

ಇದು ಸ್ಥಳೀಯ ಕಾಂಗ್ರೆಸ್‌ ಮುಖಂಡರಲ್ಲಿ ತಳಮಳ ಮೂಡಿಸಿದೆ. ಸ್ಥಳೀಯರಿಗೆ ಅವಕಾಶ ನೀಡಬೇಕು, ಯಾವುದೇ ಕಾರಣಕ್ಕೂ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಬಾರದು ಎನ್ನುವ ಎಚ್ಚರಿಕೆ ಸಂದೇಶವನ್ನು ಕಳುಹಿಸಿಕೊಟ್ಟಿದ್ದಾರೆ. ಸ್ಥಳೀಯ ಮುಖಂಡರಾದ ಜಯರಾಜ ಹಲ ಗೇಕರ, ರಾಜು ಜಾಧವ ರೇಸ್‌ನಲ್ಲಿದ್ದಾರೆ. ಜೆಡಿಎಸ್‌ನಲ್ಲಿ ಸಂತೋಷ ಉಪಾ ಧ್ಯಾಯ, ಶಂಕರ, ಗಂಗನಗೌಡ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.