ಬೆಳಗಾವಿ: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಯತ್ನಿಸಿದ ಅರೋಪದ ಮೇಲೆ ಜಿಲ್ಲೆಯ ಮೂಡಲಗಿ ಹಾಗೂ ಗೋಕಾಕ ತಾಲ್ಲೂಕುಗಳ 6 ಮಂದಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿ ಕರೆದೊಯ್ದಿದ್ದಾರೆ.
ಬಂಧಿತರ ಪೈಕಿ ಕುಲಗೋಡ ಠಾಣೆ ವ್ಯಾಪ್ತಿಯ ಕಳ್ಳಿಗುದ್ದಿ ಗ್ರಾಮದ ಅರುಣ್ ಮಾರುಡ್ಡಿ ಒಬ್ಬರು ಎಂದು ಮೂಲಗಳು ತಿಳಿಸಿವೆ. ಉಳಿದವರ ವಿವರ ತಿಳಿದುಬಂದಿಲ್ಲ.
ಶನಿವಾರವೇ ಬಂದಿದ್ದ ಸಿಸಿಬಿ ಪೊಲೀಸರು, ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಮೇಲೆ ನಿಗಾ ಇಟ್ಟಿದ್ದರು. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಕೆಲವು ಮುಖ್ಯ ವ್ಯಕ್ತಿಗಳ ಮನೆಗಳಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲಲ್ಲಿ 10ಕ್ಕೂ ಹೆಚ್ಚಿನ ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರು ಮಂದಿ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ಮಾಹಿತಿ ಖಚಿತಪಡಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಸುಧೀರ್ಕುಮಾರ್ ರೆಡ್ಡಿ, ‘ಬೆಂಗಳೂರಿನ ಸಿಸಿಬಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ ಮಾಹಿತಿ ಇದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಎಲ್ಲವನ್ನೂ ಬಹಿರಂಗಪಡಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಯಾರ್ಯಾರನ್ನು ಬಂಧಿಸಿದ್ದಾರೆ ಎನ್ನುವ ವಿವರ ನಮ್ಮ ಬಳಿ ಇಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.