ಬೆಳಗಾವಿ: ‘ವಿಟಿಯು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಬೇಕು’ ಎಂದು ಶುಕ್ರವಾರ ಇಲ್ಲಿ ಎಬಿವಿಪಿಯಿಂದ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಒತ್ತಾಯಿಸಲಾಯಿತು.
ವಿಶ್ವವಿದ್ಯಾಲಯದಲ್ಲಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ಮುಂದಿನ ವಾರ ಅಕಾಡೆಮಿಕ್ ಮತ್ತು ಸೆನೆಟ್ ಸದಸ್ಯರ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿ ಕುಲಪತಿಗೆ ತಲುಪಿಸುವ ನಿರ್ಣಯ ಕೈಗೊಳ್ಳಲಾಯಿತು.
‘ಪರೀಕ್ಷೆ ಮುಗಿದ ತಕ್ಷಣ ಪ್ರತಿ ಉತ್ತರ ಪತ್ರಿಕೆಯ ಸ್ಕಿಮ್ ಆಫ್ ವ್ಯಾಲ್ಯೂಯೇಷನ್ ಅನ್ನು ತಕ್ಷಣವೇ ಅಪ್ಲೋಡ್ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಫೋಟೊ ಕಾಪಿಯಲ್ಲಿ ತಮ್ಮ ಉತ್ತರಗಳನ್ನು ಪರಿಶೀಲಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಯು ಮರುಮೌಲ್ಯಮಾಪನದಲ್ಲಿ, ಪಾಸ್ ಆಗುವಷ್ಟು ಅಂಕ ಗಳಿಸದಿದ್ದರೆ ಆಯಾ ಕಾಲೇಜಿನ ಪ್ರಾಂಶುಪಾಲರ ಸಹಿಯೊಂದಿಗೆ ‘ಚಾಲೆಂಜಿಂಗ್ ರೀ ವ್ಯಾಲ್ಯೂಯೇಷನ್’ಗೆ ಅವಕಾಶ ನೀಡಬೇಕು. ತಪ್ಪಾಗಿ ಅಥವಾ ಅಜಾಗರೂಕರಾಗಿ ವ್ಯಾಲ್ಯೂಯೇಷನ್ ಮಾಡುವ ಅಧ್ಯಾಪಕರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕಾಲೇಜುಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಡೀನ್ ನೇಮಿಸಬೇಕು. ವಿಶ್ವವಿದ್ಯಾಲಯ ಮಟ್ಟದಲ್ಲೂ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಡೀನ್ ನೇಮಿಸಬೇಕು’ ಎಂದು ಒತ್ತಾಯಿಸಲಾಯಿತು.
ಎಬಿವಿಪಿ ರಾಜ್ಯ ಘಟಕದ ಉಪಾಧ್ಯಕ್ಷ ಆನಂದ ಹೊಸೂರು, ಎಸ್ಜಿಬಿಐಟಿ ಕಾಲೇಜಿನ ಪ್ರಾಂಶುಪಾಲ ಸಿದ್ದರಾಮಪ್ಪ ಇಟ್ಟಿ, ಜೆಐಟಿ ಕಾಲೇಜಿನ ಪ್ರಾಂಶುಪಾಲ ಎಸ್.ವಿ. ಗೊರಬಾಳ, ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ರೋಹಿತ ಹುಮನಾಬಾದಿಮಠ, ನಗರ ಘಟಕದ ಕಾರ್ಯದರ್ಶಿ ಅನುದೀಪ ಕುಲಕರ್ಣಿ, ವಿದ್ಯಾರ್ಥಿ ಮಲ್ಲನಗೌಡ ಗಂಗಾಪುರ, ವಿವಿಧ ತಾಂತ್ರಿಕ ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.