ಅಥಣಿ: ಪಟ್ಟಣದಿಂದ 3 ಕಿ.ಮೀ. ದೂರದಲ್ಲಿರುವ ಸಂಕೋನಟ್ಟಿ ಗ್ರಾಮದವರಾದ ವೃತ್ತಿಯಲ್ಲಿ ಎಂಜಿನಿಯರ್ ಪ್ರವೃತ್ತಿಯಲ್ಲಿ ಕೃಷಿ ಮಾಡುತ್ತಿರುವ ರಾಜಶೇಖರ ಟೋಪಗಿ ಅವರು ಕೃಷಿ ಹೊಂಡ ನಿರ್ಮಿಸಿಕೊಂಡು ಬೇಸಾಯದಲ್ಲಿ ಖುಷಿ ಕಾಣುತ್ತಿದ್ದಾರೆ.
ತಾಲ್ಲೂಕಿನ ಕಾಲು ಭಾಗ ನದಿ ತೀರದ ಪ್ರದೇಶವಾದರೆ ಮುಕ್ಕಾಲು ಪ್ರದೇಶ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಅವರು ಕೃಷಿ ಹೊಂಡ, ಕೆರೆ–ಕಟ್ಟೆಗಳು, ಕೊಳವೆಬಾವಿಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ. ಇದಕ್ಕೆ ರಾಜಶೇಖರ ಅವರೂ ಹೊರತಾಗಿರಲಿಲ್ಲ. ಹೀಗಾಗಿ, ಅವರು ಕೃಷಿ ಹೊಂಡ ನಿರ್ಮಿಸಿದ್ದಾರೆ. ಆಗಾಗ ನಾಲೆಯಲ್ಲಿ ಸಿಗುವ ನೀರು ಹಾಗೂ ಕೊಳವೆಬಾವಿಯಿಂದ ನೀರನ್ನು ಕೃಷಿ ಹೊಂಡದಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ತೊಂದರೆ ಆಗದಂತೆ ಮಾಡಿಕೊಂಡಿದ್ದಾರೆ.
ಸುಮಾರು 4 ಕೋಟಿ ಲೀಟರ್ ನೀರು ಸಂಗ್ರಹಿಸುವಷ್ಟು ದೊಡ್ಡದಾದ ಕೃಷಿ ಹೊಂಡ ನಿರ್ಮಿಸಿದ್ದಾರೆ. ಕೃಷಿ ಚಟುವಟಿಕೆಗೆ ಅದನ್ನು ಬಳಸುತ್ತಿದ್ದಾರೆ. 120 ಅಡಿ ಉದ್ದ 180 ಅಡಿ ಅಗಲ ಹಾಗೂ 53 ಅಡಿ ಆಳವಿದೆ. 7 ಎಕರೆ ದ್ರಾಕ್ಷಿ ಹಾಗೂ ಎಕರೆಯಲ್ಲಿ ಹಣ್ಣು ಬೆಳೆಯುತ್ತಾರೆ. ಅದಕ್ಕೆ ಈ ಹೊಂಡದ ನೀರನ್ನು ಬಳಸುತ್ತಾರೆ.
‘ಹೊಂಡವನ್ನು ಒಮ್ಮೆ ತುಂಬಿಸಿದರೆ ವರ್ಷದವರೆಗೂ ಕೃಷಿಗೆ ನೀರಿನ ಅಭಾವ ಉಂಟಾಗುವದಿಲ್ಲ. ಹೊಂಡದಿಂದ ಬಹಳ ಅನುಕೂಲವಾಗಿದೆ’ ಎನ್ನುತ್ತಾರೆ ಅವರು. ‘ತೋಟದಲ್ಲಿ ಮೂರು ಬೋರ್ವೆಲ್ಗಳಿವೆ. ಅದರ ನೀರನ್ನು ಸಂಪೂರ್ಣವಾಗಿ ಕೃಷಿ ಹೊಂಡ ತುಂಬಿಸಲು ಬಳಸುತ್ತೇವೆ. ಮಳೆ ಬಂದಾಗಲೂ ನೆರವಾಗುತ್ತದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.