ADVERTISEMENT

ಬೆಳಗಾವಿ | ಬಿರುಸಿನ ಮಳೆ; ಬಿತ್ತನೆಗೆ ಬೇಡ ಅವಸರ

ಹವಾಮಾನ ವೈ‍‍‍‍ಪರೀತ್ಯದ ಪರಿಣಾಮ ನಿರಂತರ ಮಳೆ; ಜೂನ್‌ ಎರಡನೇ ವಾರ ಮುಂಗಾರು ಪ್ರವೇಶ

ಸಂತೋಷ ಈ.ಚಿನಗುಡಿ
Published 28 ಮೇ 2025, 3:57 IST
Last Updated 28 ಮೇ 2025, 3:57 IST
<div class="paragraphs"><p>ಚನ್ನಮ್ಮನ ಕಿತ್ತೂರು ವ್ಯಾಪ್ತಿಯಲ್ಲಿ ಮಳೆ ಬಿಡುವು ನೀಡಿದ್ದರಿಂದ ರೈತರು ಹೊಲ ಹದ ಮಾಡುವಲ್ಲಿ ನಿರತರಾದರು </p></div>

ಚನ್ನಮ್ಮನ ಕಿತ್ತೂರು ವ್ಯಾಪ್ತಿಯಲ್ಲಿ ಮಳೆ ಬಿಡುವು ನೀಡಿದ್ದರಿಂದ ರೈತರು ಹೊಲ ಹದ ಮಾಡುವಲ್ಲಿ ನಿರತರಾದರು

   

ಪ್ರಜಾವಾಣಿ ಚಿತ್ರ: ಪ್ರದೀಪ ಮೇಲಿನಮನಿ

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಯಥೇಚ್ಚವಾಗಿ ಆಗಿದ್ದರಿಂದ ರೈತರು ಬಿತ್ತನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಇನ್ನೂ ಜಿಲ್ಲೆಗೆ ಮುಂಗಾರು ಪ್ರವೇಶ ಪಡೆದಿಲ್ಲ. ಆದ್ದರಿಂದ ಬಿತ್ತನೆಗೆ ಅವಸರ ಮಾಡಬಾರದು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.

ADVERTISEMENT

ವಾಡಿಕೆ ಪ್ರಕಾರ ಜೂನ್‌ 7ಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ. ಬಿತ್ತನೆ ಕಾರ್ಯಗಳು ಜೂನ್‌ 15ರಿಂದ ಆರಂಭವಾಗುತ್ತವೆ. ಆಗ ನೆಲವು ಆಳದವರೆಗೆ ಹಸಿ ಹಿಡಿದಿರುತ್ತದೆ. ಸದ್ಯ ಬೀಳುತ್ತಿರುವ ಮಳೆ ಚಂಡಮಾರುತದಿಂದ ಉಂಟಾದ ‘ಅಡ್ಡಮಳೆ’ಯಾಗಿದೆ. ಚಂಡಮಾರುತದ ಪ್ರಭಾವ ಕಡಿಮೆಯಾದರೆ ಏಕಾಏಕಿ ಮಳೆ ನಿಲ್ಲುತ್ತದೆ. ಬೇಸಿಗೆ ದಿನಗಳು ಇನ್ನೂ ಮುಗಿದಿಲ್ಲವಾದ್ದರಿಂದ ಬಿಸಿಲಿನ ಧಗೆ ಹೆಚ್ಚಬಹುದು. ಆಗ ಭೂಮಿ ಮತ್ತೆ ಒಣಗುವ ಸಾಧ್ಯತೆ ಇರುತ್ತದೆ ಎಂಬುದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರ ಅಭಿಮತ.

ಮೇ ಮೊದಲ ವಾರದಿಂದಲೇ ಮಳೆ ಸುರಿಯುತ್ತಿದೆ. ಮುಂಗಾರು ವಾಡಿಕೆಗಿಂತ ಮುಂಚೆಯೇ ಪ್ರವೇಶ ಮಾಡಿದೆ ಎಂದು ಹಲವು ರೈತರು ಭಾವಿಸಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿರುವ ಬಹುಪಾಲು ಕಪ್ಪು ಮಣ್ಣಿನ ಹೊಲಗಳು ಸಕಷ್ಟು ನೀರು ಹಿಡಿದಿವೆ. ಆಳದವರೆಗೂ ತೇವವಿದೆ. ಒಂದೆರಡು ವಾರ ಬಿಸಿಲು ಬಿದ್ದರೂ ಮಣ್ಣಿನಲ್ಲಿ ಹಸಿ ಆರುವುದಿಲ್ಲ. ಇದರಿಂದ ಬೆಳೆಗೆ ಏನೂ ತೊಂದರೆ ಆಗುವುದಿಲ್ಲ ಎಂಬುದು ಕೆಲವು ರೈತರ ಲೆಕ್ಕಾಚಾರ. ಇದೇ ಕಾರಣಕ್ಕೆ ಬೈಲಗೊಂಗಲ, ಸವದತ್ತಿ, ಚಿಕ್ಕೋಡಿ, ನಿಪ್ಪಾಣಿ ಭಾಗದಲ್ಲಿ ಈಗಾಗಲೇ ಹಲವರು ಮುಂಗಾರು ಬಿತ್ತನೆಗೆ ಮುಂದಡಿ ಇಟ್ಟಿದ್ದಾರೆ.

ಬಿಡುವಿಗಾಗಿ ಕಾದ ರೈತರು: ‘ಸದ್ಯ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಮಣ್ಣಿನ ಹೆಂಟೆಗಳು ಒಡೆದಿವೆ. ಆದರೆ, ಹೊಲ ಹದ ಮಾಡಲು ಮಳೆ ಬಿಡುವು ನೀಡಬೇಕಿದೆ. ಮೂರು ದಿನಗಳ ಬಿಡುವಿಗಾಗಿ ರೈತರು ಕಾಯುತ್ತಿದ್ದಾರೆ. ಜೂನ್‌ ಎರಡನೇ ವಾರದಲ್ಲಿ ಮಳೆ ತುಸು ಬಿಡುವ ನೀಡುವ ನಿರೀಕ್ಷೆ ಇದೆ’ ಎಂದು ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಪ್ರವೀಣ ಯಡಹಳ್ಳಿ ಅಭಿಪ್ರಾಯ ಪಟ್ಟಿದ್ದಾರೆ.

ಮಹಾರಾಷ್ಟ್ರ ಭಾಗದಲ್ಲಿ ಹವಾಮಾನ ವೈಪರೀತ್ಯದ ಕಾರಣ ವಿಪರೀತ ಮಳೆಯಾಗುತ್ತಿದೆ. ಅದರದೇ ಪ್ರಭಾವ ಜಿಲ್ಲೆಯ ಮೇಲೂ ಆಗುತ್ತಿದೆ. ಇದು ಏಕಾಏಕಿ ನಿಲ್ಲಲೂಬಹುದು. ರೈತರು ಹೊಲದ ಹದ ನೋಡಿಕೊಂಡು ಬಿತ್ತನೆ ಮಾಡಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.

ಬೀಜ, ಗೊಬ್ಬರ ದಾಸ್ತಾನು: ಮುಂಗಾರಿಗೆ ಬೇಕಾಗುವ ಸೋಯಾಬಿನ್, ಭತ್ತ, ಉದ್ದು, ಹೆಸರು, ತೊಗರಿ, ಮೆಕ್ಕೆಜೋಳ, ಜೋಳ ಸೇರಿದಂತೆ ಎಲ್ಲ ಬಿತ್ತನೆ ಬೀಜಗಳನ್ನು ಕೃಷಿ ಅಧಿಕಾರಿಗಳು ಈಗಾಗಲೇ ಸಂಗ್ರಹ ಮಾಡಿದ್ದಾರೆ. ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಣೆ ಅಭಿಯಾನ ಕೂಡ ಆರಂಭವಾಗಿದೆ.

ಈ ಬಾರಿ ಒಟ್ಟು 59,500 ಕ್ವಿಂಟಲ್‌ನಷ್ಟು ಬಿತ್ತನೆ ಬೀಗಳನ್ನು ಸಂಗ್ರಹ ಮಾಡಲಾಗಿದೆ. ಆದರೆ, ರೈತರಿಂದ ಬೇಡಿಕೆ ಇರುವುದು ಅಂದಾಜು 40 ಸಾವಿರ ಕ್ವಿಂಟಲ್‌ ಮಾತ್ರ. ದೇಸಿ ತಳಿಗಳೂ ಸೇರಿದಂತೆ ವಿವಿಧ ನಮೂನೆಯ ಹೆಚ್ಚುವರಿ ಬೀಜಗಳನ್ನೂ ಕೃಷಿ ಇಲಾಖೆ ಸಂಗ್ರಹ ಮಾಡಿಟ್ಟಿದೆ.

ಇದರೊಂದಿಗೆ ವಿವಿಧ ಪ್ರಕಾರದ ರಸಗೊಬ್ಬರಗಳು ಸೇರಿ 1.06 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಗೊಬ್ಬರ ದಾಸ್ತಾನು ಕೂಡ ಇದೆ.

ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ರೈತರು ಸೋಮವಾರ ಕಬ್ಬು ನಾಟಿ ಮಾಡಿದರು ಪ್ರಜಾವಾಣಿ ಚಿತ್ರ: ವಿಜಯಮಹಾಂತೇಶ ಅರಕೇರಿ
ಜಿಲ್ಲೆಯಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಷ್ಟು ಬೀಜ ಗೊಬ್ಬರ ದಾಸ್ತಾನು ಇದೆ. ಈಗಾಗಲೇ ಸಾಕಷ್ಟು ರೈತರು ಪಡೆದಿದ್ದು ಕೃಷಿ ಚಟುವಟಿಕೆಗೆ ಯಾವುದೇ ಅಡಚಣೆ ಇಲ್ಲ
ಶಿವನಗೌಡ ಪಾಟೀಲ ಜಂಟಿ ಕೃಷಿ ನಿರ್ದೇಶಕ
ನೆಲವು ಸಾಕಷ್ಟು ಹಸಿ ಹಿಡಿದಿದ್ದರೆ ರೈತರು ಬಿತ್ತನೆ ಮಾಡಬಹುದು. ಮೇಲ್ಪದರು ಮಾತ್ರ ಹಸಿಯಾಗಿದ್ದರೆ ಮುಂಗಾರು ಪ್ರವೇಶದವರೆಗೆ ಕಾಯಬೇಕು
ಪ್ರವೀಣ ಯಡಹಳ್ಳಿ ಕೃಷಿ ವಿಜ್ಞಾನಿ ಕೆಎಲ್‌ಇ– ಕೃಷಿ ವಿಜ್ಞಾನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.